ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ 1000ಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲು ಅಬಕಾರಿ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್)ಯು ಖಂಡಿಸಿದ್ದು, ಬೆಂಗಳೂರು ಜಿಲ್ಲಾ ಸಮಿತಿಯಿಂದ ಬುಧವಾರ ನಗರದ ಫ್ರೀಡಂಪಾರ್ಕನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಎ ಶಾಂತ ಅವರು, ಈಗಾಗಲೇ ಮದ್ಯಪಾನದಂತಹ ದುಶ್ಚಟದಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳು ಹಾಗೂ ನಗರಗಳಲ್ಲಿನ ಸೂಪರ್ ಮಾರುಕಟ್ಟೆಗಳಲ್ಲಿ ಹೊಸ ಮತ್ತು ಬಳಕೆ ಇಲ್ಲದ ಪರವಾನಗಳಿಗೆ ಮರುಜೀವ ನೀಡುಬೇಕು ಎಂದು ಅಬಕಾರಿ ಇಲಾಖೆ ಪ್ರಸ್ತಾವನೆ ನೀಡಿದೆ. ಅಲ್ಲದೆ, ಇಲಾಖೆಯು ಸುಮಾರು 600ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇಲ್ಲದಿರುವುದನ್ನು ಗುರುತಿಸಿ, ಮದ್ಯದ ಅಂಗಡಿಗಳಿಗೆ ಅನುಮತಿ ನೀಡಲು ಸಜ್ಜಾಗಿದೆ ಎಂದರು.
ಸಮಾಜದಲ್ಲಿ ಹೆಣ್ಣುಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ, ಕುಟುಂಬ ಕಲಹಗಳಿಗೆ ಸಮಾಜಘಾತಕ ಕೃತ್ಯಗಳಿಗೆ ಮದ್ಯಪಾನ ಎಡೆ ಮಾಡಿಕೊಡುವುದನ್ನು ಸರ್ಕಾರದ ಅಂಕಿಅಂಶಗಳ ಬಹಿರಂಗಪಡಿಸಿವೆ. ಮೊದಲೇ ಜನರು ಕಳ್ಳಬಟ್ಟಿ ಕುಡಿದು ಸಾಯುತ್ತಿದ್ದಾರೆ. ಸಮಾಜದ ‘ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ವರಮಾನವನ್ನು ಸಂಗ್ರಹಿಸಲು’ ಎಂಬ ಕ್ಷುಲ್ಲಕ ಕಾರಣ ನೀಡಿ ಸಮಾಜವನ್ನು ಸಾಂಸ್ಕೃತಿಕ ಅಧಪತನಕ್ಕೆ ತಳ್ಳಲು ಸರ್ಕಾರವು ಈ ಮಾರ್ಗ ಹಿಡಿದಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದ ಈ ಪ್ರಸ್ತಾವನೆಯನ್ನು ಮಹಿಳಾ ಸಮುದಾಯವು ಒಕ್ಕೊರಳಿನಿಂದ ಖಂಡಿಸಬೇಕಿದೆ ಎಂದು ಶಾಂತ ನುಡಿದರು.
ಟಿಪ್ಪುವನ್ನು ಎತ್ತಿಹಿಡಿಯುವ ಸರ್ಕಾರವು ‘ಸರ್ಕಾರದ ಆದಾಯಕ್ಕಿಂತ ಜನತೆಯ ಶಾಂತಿಯುತ ಜೀವನ ಮುಖ್ಯ’ ಎಂಬ ಅವರ ಆದರ್ಶವನ್ನು ಗಾಳಿಗೆ ತೂರಿದೆ. ಸರ್ಕಾರದ ಇಂತಹ ಜನ ವಿರೋಧಿ, ಮಹಿಳಾ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಸಂಘಟಿತ ಹೋರಾಟ ಕಟ್ಟಬೇಕು ಎಂದು ಪ್ರತಿಭಟನೆಕಾರರಿಗೆ ಕರೆ ನೀಡಿದರು.