Breaking News
Birds eye view photo of Bangalore in India

ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬೆಂಗಳೂರು ಬಂದ್

Spread the love

ನಾಳೆ ನಡೆಯುವ ಬೆಂಗಳೂರು ಬಂದ್​ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಮಂಗಳವಾರದ ಬೆಂಗಳೂರು ಬಂದ್‌ಗೆ ರಾಜ್ಯ ರಾಜಧಾನಿ ಬಹುತೇಕ ಸ್ತಬ್ಧವಾಗಲಿದೆ.

ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬೆಂಗಳೂರು ಬಂದ್ ಆಗಲಿದೆ. ಶಾಲಾ ಕಾಲೇಜುಗಳಿಗೂ ರಜೆ ಇರಲಿದೆ. ಸಿನಿಮಾ, ಟ್ಯಾಕ್ಸಿ, ಐಟಿ-ಬಿಟಿ, ಹೋಟೆಲ್ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಬೇಕೆಂದು ಸಂಘಟನೆಗಳು ಕೋರಿವೆ.

ಬೆಳಗ್ಗೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲು ಸಂಘಟನೆಗಳು ನಿರ್ಧರಿಸಿವೆ. 150 ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್‌ಗೆ ಬೆಂಬಲ ಸೂಚಿಸಿವೆ. ಬಿಜೆಪಿ, ಜನತಾ ದಳ ಹಾಗೂ ಆಮ್ ಆದ್ಮಿ ಪಕ್ಷ ಬೆಂಬಲ ಘೋಷಿಸಿವೆ.

ಏನೇನು ಇರಲ್ಲ: ಆಟೋಗಳು, ಟ್ಯಾಕ್ಸಿ, ಓಲಾ, ಊಬರ್, ಪೆಟ್ರೋಲ್ ಬಂಕ್, ಶಾಲಾ-ಕಾಲೇಜು, ಭಾಗಶಃ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಇರಲ್ಲ. ಕೈಗಾರಿಕೆಗಳು, ವಾಣಿಜ್ಯೋದ್ಯಮ, ಅಂಗಡಿ ಮುಂಗಟ್ಟುಗಳು, ಕೆ ಆರ್ ಮಾರುಕಟ್ಟೆ ಬಂದ್ ಆಗಲಿದೆ.

ಏನೇನು ಇರಲಿದೆ: ಬೀದಿಬದಿ ವ್ಯಾಪಾರಗಳು, ಸರ್ಕಾರಿ ಕಚೇರಿಗಳು, ನಮ್ಮ ಮೆಟ್ರೋ, ಖಾಸಗಿ ಕಚೇರಿಗಳು, ಆಸ್ಪತ್ರೆ, ಔಷಧ ಅಂಗಡಿಗಳು, ಆಂಬ್ಯುಲೆನ್ಸ್, ಹಾಲು ಮತ್ತು ಅಗತ್ಯ ಸೇವೆಗಳು ದೊರೆಯಲಿವೆ.

ಕನ್ನಡ ಸಂಘಟನೆಗಳಿಂದ ಬಂದ್​ಗೆ ವಿರೋಧ: ಕಾವೇರಿ ಬಗ್ಗೆ ಇದೇ ಶುಕ್ರವಾರ(ಸೆ.29) ರಂದು ನಡೆಯುವ “ಅಖಂಡ ಕರ್ನಾಟಕ ಬಂದ್” ಮತ್ತು ರಾಜ್ಯಾದ್ಯಂತ ಭಾರಿ ಚಳವಳಿ ನಡೆಸುವ ಬಗ್ಗೆ ಕನ್ನಡ ಒಕ್ಕೂಟದ ಆಶ್ರಯದಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ನಾಳೆ ನಡೆಯುವ ಬೆಂಗಳೂರು ಬಂದ್​ಗೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ರಾಜಭವನಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿದ್ದಾರೆ.

ಶಾಲಾ- ಕಾಲೇಜುಗಳಿಗೆ ರಜೆ – ಜಿಲ್ಲಾಧಿಕಾರಿ ದಯಾನಂದ: ತಮಿಳುನಾಡಿಗೆ ಕಾವೇರಿ ಜಲಾಶಯದಿಂದ ನೀರು ಹರಿಸಿರುವುದನ್ನು ಖಂಡಿಸಿ ನಗರದ ವಿವಿಧ ಸಂಘಟನೆಗಳು ಸೆಪ್ಟೆಂಬರ್ 26 ರಂದು ‘ಬೆಂಗಳೂರು ಬಂದ್’ ಘೋಷಿಸಿರುವುದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರು: ಬೆಂಗಳೂರು ಬಂದ್‌ಗೆ ಖಾಸಗಿ ಶಾಲೆಗಳ ಒಕ್ಕೂಟ ಬೆಂಬಲ ಘೋಷಿಸಿದೆ. ತಮ್ಮ ಒಕ್ಕೂಟದ ಎಲ್ಲ ಖಾಸಗಿ ಶಾಲೆಗಳನ್ನು ಬಂದ್‌ ಮಾಡಲಿದ್ದಾರೆ. ಪರೀಕ್ಷಾ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಒಕ್ಕೂಟದ ಮುಖಂಡರಾದ ಲೋಕೇಶ್‌ ತಾಳಿಕೋಟೆ ತಿಳಿಸಿದ್ದಾರೆ.

ಐಟಿ ಬಂದ್‌: ಐಟಿ ಕನ್ನಡಿಗರ ಬಳಗ ಮೂರೂವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳ ನೌಕರರು ಕೆಲಸಕ್ಕೆ ರಜೆ ಹಾಕಿ ಬೈಕ್ ರ‍್ಯಾಲಿ ನಡೆಸಲಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಶಿವಾನಂದ್ ಹೇಳಿದ್ದಾರೆ.


Spread the love

About Laxminews 24x7

Check Also

ಸಿಎಂ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದವರೇ ವಿಶ್ವಾಸ ಕಳೆದುಕೊಂಡಿದ್ದಾರೆ: ಬಿ ವೈ ವಿಜಯೇಂದ್ರ

Spread the loveಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದ ಶಾಸಕರುಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ