Breaking News

ಕ್ವಿಟ್ ಇಂಡಿಯಾ ದಿನಾಚರಣೆ.. ರ‍್ಯಾಲಿ ನಡೆಸದಂತೆ ಮುಂಬೈನಲ್ಲಿ ಗಾಂಧೀಜಿ ಮರಿ ಮೊಮ್ಮಗ ತುಷಾರ್​ ಗಾಂಧಿ ಬಂಧನ, ಬಿಡುಗಡೆ

Spread the love

ಮುಂಬೈ (ಮಹಾರಾಷ್ಟ್ರ) : ಕ್ವಿಟ್​ ಇಂಡಿಯಾ ಚಳವಳಿಯ 81ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಆಗಸ್ಟ್​ ಕ್ರಾಂತಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿ ನಡೆಸದಂತೆ ನನ್ನನ್ನು ಪೊಲೀಸರು ತಡೆದಿದ್ದಾರೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ್​ ಗಾಂಧಿ ಆರೋಪಿಸಿದ್ದಾರೆ.

 

ಇಲ್ಲಿನ ಆಗಸ್ಟ್​ ಕ್ರಾಂತಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಷಾರ್ ಗಾಂಧಿ ಅವರು ಇಂದು ಬೆಳಿಗ್ಗೆ ಸುಬುರ್ಬಾನ್​ ಸಾಂತಾ ಕ್ರೂಝ್​ನಲ್ಲಿರುವ ಮನೆಯಿಂದ ಹೊರಟಿದ್ದರು. ಈ ವೇಳೆ ಮನೆಗೆ ಆಗಮಿಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅಲ್ಲದೆ ಕಾರ್ಯಕ್ರಮಕ್ಕೆ ಹೋಗದಂತೆ ತಡೆದಿದ್ದಾರೆ ಎಂದು ಅವರು ದೂರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ತುಷಾರ್​ ಗಾಂಧಿ, ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ನಾನು ಕ್ವಿಟ್ ಇಂಡಿಯಾ ದಿನದ ಕಾರ್ಯಕ್ರಮಕ್ಕೆ ಮನೆಯಿಂದ ಹೊರಟಾಗ ಸಾಂತಾ ಕ್ರೂಜ್ ಠಾಣೆಯ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಈ ಹಿಂದೆ ಐತಿಹಾಸಿಕ ದಿನದಂದು ನನ್ನ ಮುತ್ತಾತ ಬಾಪು ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮನೆಯಿಂದ ಹೊರಟ ತಮ್ಮನ್ನು ಆಗಸ್ಟ್ ಕ್ರಾಂತಿ ಮೈದಾನಕ್ಕೆ ತೆರಳದಂತೆ ಪೊಲೀಸರು ತಡೆದಿದ್ದಾರೆ. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರ ಜಿ ಜಿ ಪರೀಖ್​ ಅವರನ್ನು ಪೊಲೀಸರು ತಡೆದಿದ್ದಾರೆ ಎಂದು ಹೇಳಿದ್ದಾರೆ. ತುಷಾರ್​ ಗಾಂಧಿ, ತೀಸ್ತಾ ಸೆಟಲ್ವಾಡ್​ ಮತ್ತು ಪರೀಖ್​ ಅವರು ಕ್ವಿಟ್​ ಇಂಡಿಯಾ ಚಳವಳಿ ನೆನಪಿನ ಸಂಬಂಧ ಇಲ್ಲಿನ ಗಿರ್​ಗಾಂವ್​ ಚೌಪಟ್ಟಿಯಿಂದ ಆಗಸ್ಟ್​​ ಕ್ರಾಂತಿ ಮೈದಾನಕ್ಕೆ ಹಮ್ಮಿಕೊಂಡಿದ್ದ ಶಾಂತಿ ರ‍್ಯಾಲಿಯಲ್ಲಿ ಭಾಗವಹಿಸಬೇಕಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆಗಸ್ಟ್​ ಕ್ರಾಂತಿ ಮೈದಾನಕ್ಕೆ ಹಮ್ಮಿಕೊಂಡಿದ್ದ ರ‍್ಯಾಲಿಗೆ ಅವಕಾಶ ನಿರಾಕರಿಸಿರುವುದರಿಂದ ತುಷಾರ್​ ಗಾಂಧಿ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಹೇಳಲಾಗಿದೆ. ಬಳಿಕ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸೆಟಲ್ವಾಡ್ ಅವರು ಆಗಸ್ಟ್​ ಕ್ರಾಂತಿ ಮೈದಾನಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಪರೀಖ್​ ಅವರು ಗಿರ್ ಗಾಂವ್ ನಲ್ಲಿರುವ ಲೋಕಮಾನ್ಯ ತಿಲಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ನಿರ್ಗಮಿಸಿದರು


Spread the love

About Laxminews 24x7

Check Also

ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 6ರ ಗೊಂದಲ ಸರಿಪಡಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

Spread the loveಬೆಂಗಳೂರು: ಹಿಂದೂ ಉತ್ತರಾಧಿಕಾರ ಕಾಯಿದೆ-1956ರ ಸೆಕ್ಷನ್ 6ರಲ್ಲಿರುವ ತಿದ್ದುಪಡಿಯಲ್ಲಿ ಮೃತಪಟ್ಟ ವ್ಯಕ್ತಿಯ ತಾಯಿ ಮತ್ತು ವಿಧವಾ ಪತ್ನಿಯ ಹಕ್ಕುಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ