ವಿಜಯಪುರ: ಕೊನೆಗೂ ಒಂದೂವರೆ ತಿಂಗಳ ನಂತರ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿದೆ. ಸೋಮವಾರ ರಾತ್ರಿಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ಮಂಗಳವಾರ ದಿನವಿಡಿ ಜಿಟಿ ಜಿಟಿ ಮಳೆಯಾಗಿದೆ.
ಸದ್ಯ ಹವಾಮಾನ ಇಲಾಖೆಯ ಮಾಹಿತಿಯಂತೆ ಇಂದು ಮಂಗಳವಾರ ಬೆಳಗ್ಗೆ 8-30ರಿಂದ ಸಂಜೆ 5-30ರವರೆಗೆ 5.2 ಮಿ,ಮೀ ಮಳೆ ದಾಖಲಾಗಿದೆ. ಇನ್ನೂ ಐದು ದಿನ ಇದೇ ರೀತಿ ಮಳೆ ಮುಂದುವರೆಯಲಿದೆ.
ಭಾರತದ ಹವಾಮಾನ ವಿಭಾಗದ ಮಾಹಿತಿಜು.19 ರಿಂದ 23ರವರೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ. ವಿಜಯಪುರ ತಾಲೂಕಿನಲ್ಲಿ ಮುಂದಿನ ಐದು ದಿನಗಳಲ್ಲಿ 38.4 ಮೀ. ಮೀಟರ್, ಬಸವನಬಾಗೇವಾಡಿ ತಾಲೂಕಿನಲ್ಲಿ 40.1 ಮೀ.ಮೀ, ಇಂಡಿ ತಾಲೂಕಿನಲ್ಲಿ 38.9 ಮೀ.ಮೀ, ಮುದ್ದೇಬಿಹಾಳ ತಾಲೂಕಿನಲ್ಲಿ 29.7 ಮೀ.ಮೀ ಹಾಗೂ ಸಿಂದಗಿ ತಾಲೂಕಿನಲ್ಲಿ 29.7 ಮೀ.ಮೀಟರ್ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಂತೆ ಅಂದಾಜಿಸಲಾಗಿದೆ. ಮಂಗಳವಾರ ಗರಿಷ್ಠ ತಾಪಮಾನ 30.0 ಸೆ,ಮೀಟರ್ ಹಾಗೂ ಕನಿಷ್ಠ 20.0 ಸೆ.ಮೀಟರ್ ತಾಪಮಾನವಿತ್ತು.
ಬಿತ್ತನೆಗೆ ಸೂಚನೆ: ಕಳೆದ ವಾರ ಕೆಲವು ಕಡೆ ಮಾತ್ರ ಜಿಟಿ ಜಿಟಿ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಭೂಮಿ ಹಸಿ ಇದ್ದರೆ ಮಾತ್ರ ಬಿತ್ತನೆ ಕಾರ್ಯ ಮಾಡಬಹುದು ಎಂದು ಹವಾಮಾನ ಇಲಾಖೆ ರೈತರಿಗೆ ಸೂಚನೆ ನೀಡಿದೆ. ಸದ್ಯ ಕಬ್ಬು ಬೆಳವಣಿಗೆ ಹಂತದಲ್ಲಿರುವ ಕಾರಣ ಕಬ್ಬು ಬೆಳೆಗಾರರು ಕಬ್ಬು ಉತ್ತಮವಾಗಿ ಬೆಳೆಯಲು ಸಾರಜನಕ ಪೋಟ್ಯಾಷ್ ಒದಗಿಸುವ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡಬೇಕು ಎಂದು ಸಲಹೆ ನೀಡಿದೆ. ಮುಂದಿನ ಐದು ದಿನ ಜಿಟಿ ಜಿಟಿ ಮಳೆಯಾಗುತ್ತಿರುವ ಕಾರಣ ಸದ್ಯ ರೈತರು ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಒದಗಿಸುವುದು ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.
ವಾಯುವ್ಯ ರಾಜ್ಯಗಳಲ್ಲಿ ದಾಖಲೆ ಮೀರಿದ ಮಳೆ : 2023ರ ಮಾನ್ಸೂನ್ ಮಾರುತಗಳು ಭಾರತದ ಹಲವು ಭಾಗದಲ್ಲಿ ಭಾರಿ ಮಳೆಯನ್ನು ತಂದಿದೆ. ಜುಲೈ 1 ರಿಂದ ಜುಲೈ 12ರ ವರೆಗೆ ದಾಖಲೆಯ ಮಳೆ ಸುರಿದಿದ್ದು, ಅನೇಕ ಹಾನಿಗೆ ಇದು ಕಾರಣವಾಗಿದೆ. ಮಳೆಯಿಂದಾಗಿ ಅನೇಕ ಪ್ರದೇಶಗಳು ತತ್ತರಿಸಿದರೆ, ಇತರ ಪ್ರದೇಶದಲ್ಲಿ ಒಣ ಪರಿಸ್ಥಿತಿಯು ಮುಂದುವರೆದಿದೆ.
ದೆಹಲಿ, ಚಂಢೀಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದರೆ, ಇನ್ನಿತರ ಪ್ರದೇಶದಲ್ಲಿ ಕೊರತೆ ಎದುರಾಗಿದೆ. ಜುಲೈ 1 ರಿಂದ ಜುಲೈ 12ರವರೆಗೆ ಎಲ್ಲ 36 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶದಲ್ಲಿ ಅಧಿಕ ಮಳೆ ಬಂದಿದೆ. ಇದರಲ್ಲಿ 29 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಅಧಿಕ ಮಳೆಯಾಗಿದೆ. ಅಚ್ಚರಿ ಅಂಶವೆಂದರೆ ಸಾಮಾನ್ಯ ಮಟ್ಟಕ್ಕಿಂತ ಇಲ್ಲಿ 1,000 ಪ್ರತಿಶತ ಹೆಚ್ಚು ಮಳೆಯಾಗಿದೆ.