ಬೆಳಗಾವಿ : ರಸ್ತೆ ಸಂಚಾರ ದಟ್ಟಣೆ ಕಂಡು ಬಂದರೆ ವಾಹನ ಸವಾರರು ಪೊಲೀಸರ ವಿರುದ್ಧ ಗೊಣಗುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬ ಬೈಕ್ ಸವಾರ ಸಂಚಾರ ದಟ್ಟಣೆ ವೇಳೆ ತಾವೇ ಸ್ವತಃ ಸಂಚಾರ ನಿರ್ವಹಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು ನಗರದ ಕಪಿಲೇಶ್ವರ ಮೇಲ್ಸೇತುವೆ ಬಳಿಯ ಶನಿಮಂದಿರ ಕ್ರಾಸ್ನಲ್ಲಿ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಂಚಾರಿ ಪೊಲೀಸರಿಂದ ಮೆಚ್ಚುಗೆಇದೇ ರಸ್ತೆಯ ಮೂಲಕ ಬೈಕ್ನಲ್ಲಿ ಸದಾಶಿವ ನಗರದ ನಿವಾಸಿ ಪ್ರಸಾದ ಚೌಗುಲೆ ಎಂಬುವವರು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಭಾರಿ ಸಂಚಾರ ದಟ್ಟಣೆಯಾಗಿದ್ದನ್ನು ಗಮನಿಸಿದ್ದಾರೆ. ಬಳಿಕ ತಮ್ಮ ಬೈಕ್ ಅನ್ನು ರಸ್ತೆ ಪಕ್ಕ ನಿಲ್ಲಿಸಿ, ಟ್ರಾಫಿಕ್ ಪೊಲೀಸರಂತೆ ರಸ್ತೆ ಮಧ್ಯ ನಿಂತುಕೊಂಡು ಸಂಚಾರ ನಿರ್ವಹಣೆ ಮಾಡಿದ್ದಾರೆ.
ಪ್ರಸಾದ ಚೌಗುಲೆ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಪೊಲೀಸರಂತೆ ಕೆಲಸ ಮಾಡಿ ಟ್ರಾಫಿಕ್ ಕಂಟ್ರೋಲ್ ಮಾಡಿದ್ದು, ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ನಂತರ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಪ್ರಸಾದ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವೇಳೆ, ಪ್ರಸಾದ ಚೌಗುಲೆ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಇಡೀ ದಿನ ಎಷ್ಟು ಕಷ್ಟ ಪಡುತ್ತಾರೆ ಎನ್ನುವುದು ಇವತ್ತು ನನಗೆ ಅನುಭವವಾಯಿತು. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ಈ ರೀತಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಹೀಗಾಗಿ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.