ವಿಜಯಪುರ: ಚಿನ್ನಾಭರಣ, ಬೆಳ್ಳಿ, 2 ಕಾರು, 17 ಬೈಕ್ ಜಪ್ತಿ ಸೇರಿದಂತೆ 1.27 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, 22 ಕೇಸ್ನ 36 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ, ದರೋಡೆ ಪ್ರಕರಣಗಳನ್ನ ಬೇಧಿಸಿದ್ದಾರೆ. ಅಂತರ್ ಜಿಲ್ಲಾ, ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದು, ಮನೆ ದರೋಡೆ, ಬೈಕ್ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದೆ.
ಒಟ್ಟು 22 ಪ್ರಕರಣ ಬೇಧಿಸಿರುವ ಪೊಲೀಸರು, ಒಟ್ಟು 36 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈ ಪೈಕಿ ಪ್ರಕರಣದಲ್ಲಿ ಕಳುವಾಗಿದ್ದ ಛಿ ಚಿನ್ನ, ಬೆಳ್ಳಿ, 2 ಕಾರು ಹಾಗೂ 17 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಮುದ್ದೇಬಿಹಾಳ ಮೂಲದ ಆರ್.ಟಿ.ಓ ಜಯರಾಮ್ ನಾಯಕ್ ಅವರ ಮನೆಯಲ್ಲಿ ಜ.21ರಂದು ಕಳ್ಳತನ ನಡೆದಿತ್ತು. ಈ ವೇಳೆ 250 ಗ್ರಾಂ ಚಿನ್ನಾಭರಣ, 3 ಕೆ.ಜಿ ಬೆಳ್ಳಿ, 4.30 ಲಕ್ಷ ರೂ. ನಗದು ಕಳ್ಳತನವಾಗಿತ್ತು. ಪ್ರಕರಣ ಬೆನ್ನಟ್ಟಿದ್ದ ಪೊಲೀಸರು, ಮೂವರು ಆರೋಪಿಗಳ ಬಂಧನ ಮಾಡಿದ್ದಾರೆ.
ರಾಯಚೂರು ಮೂಲದ ಗುರುರಾಜ್, ಗುರುಕುಮಾರ್, ಸೈಯ್ಯದ್ ಅಸ್ಲಾಮ್ ಬಂಧಿತ ಆರೋಪಗಳು. ಇನ್ನೋವಾ ಕಾರು ಸೇರಿ 51 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Laxmi News 24×7