ಬೆಳಗಾವಿಯಲ್ಲಿ ಜಲಸಂಪನ್ಮೂಲ ನಿರ್ವಹಣೆ ಕುರಿತು ರಾಷ್ಟ್ರಮಟ್ಟದ ಮಂಥನ: ಫೆ.6 ರಿಂದ ಎರಡು ದಿನ ಕಾರ್ಯಾಗಾರ
• ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಜಲ ಕಾರ್ಯಾಗಾರ
• ಹವಾಮಾನ ವೈಪರಿತ್ಯದ ಸವಾಲುಗಳ ಬಗ್ಗೆ ಚರ್ಚೆ
• ನೀರಾವರಿ ಯೋಜನೆಗಳ ಸುಸ್ಥಿರತೆಗೆ ಒತ್ತು
• ಫೆ.6, 7ರಂದು ತಜ್ಞರಿಂದ ಮಂಥನ
ಬೆಳಗಾವಿಯ ಶಿವಬಸವ ನಗರದ ದಿ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್(ಇಂಡಿಯಾ) ಬೆಳಗಾವಿ ಲೋಕಲ್ ಸೆಂಟರ್ ನಲ್ಲಿ ಫೆ.6, 7ರಂದು ಜಲಸಂಪನ್ಮೂಲ ಯೋಜನೆಗಳು: ಅವುಗಳ ನಿರ್ವಹಣೆ, ಸುಸ್ಥಿರತೆ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸಿ.ಬಿ.ಹಿರೇಮಠ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಇಲಾಖೆ ಹಾಗೂ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಹಯೋಗದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಐಝಾನ್ ಹುಸೇನ್ ಹಾಗೂ ಜೈಪ್ರಕಾಶ, ರಾಜೇಶ್ ಅಮ್ಮಿನಭಾವಿ ಹಾಗೂ ಬಿ.ಕೆ.ಕುಲಕರ್ಣಿ ಉದ್ಘಾಟಿಸಲಿದ್ದಾರೆ. ಜಲಸಂಪನ್ಮೂಲ ವಿಷಯದಲ್ಲಿ 9 ಜನ ತಜ್ಞ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ ಎಂದರು.
ದೇಶವನ್ನು ಆಹಾರ ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ಅನೇಕ ಜಲಸಂಪನ್ಮೂಲ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಎಲ್ಲ ಯೋಜನೆಗಳನ್ನು ಖಚಿತ ಮಳೆ ಆಧಾರವಾಗಿಟ್ಟುಕೊಂಡು ರೂಪಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಸುಸ್ಥಿರ ಅಭಿವೃದ್ಧಿಗಳಿಂದ ಹವಾಮಾನದಲ್ಲಿ ಬದಲಾವಣೆಗಳಾಗುತ್ತಿದ್ದು, ಅದರ ಪರಿಣಾಮವಾಗಿ, ಕಾಲ ಮತ್ತು ಸ್ಥಳೀಯ ಮಳೆಗಾಲದಲ್ಲಿ ವ್ಯತ್ಯಾಸಗಳಾಗುತ್ತಿದೆ ಎಂದರು.
ಈ ಜಲಸಂಪನ್ಮೂಲ ಯೋಜನೆಗಳನ್ನು ಆಯಾ ಯೋಜನಾ ಪ್ರದೇಶಗಳಲ್ಲಿ ಅನುಸರಿಸಬೇಕಾದ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಅವಶ್ಯವಿರುವ ಸಮಯಾಧಾರಿತ ನೀರಿನ ಅವಶ್ಯಕತೆಗಳ ಆಧಾರದ ಮೇಲೆ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಹವಾಮಾನದ ವೈಪರಿತ್ಯಗಳಿಂದಾಗಿ ಉಂಟಾಗಿರುವ ಅನಿಶ್ಚಿತ ಮಳೆ ಆಧಾರದ ಹಿನ್ನೆಲೆಯಲ್ಲಿ, ಜಲಸಂಪನ್ಮೂಲ ಯೋಜನೆಗಳ ನಿರ್ವಹಣೆಯಲ್ಲಿ ವ್ಯತ್ಯಾಸವಾಗಬಹುದಾಗಿದೆ.ಈ ಹಿನ್ನೆಲೆಯಲ್ಲಿ ಹವಾಮಾನ ವೈಪರಿತ್ಯ ಸನ್ನಿವೇಶಗಳಲ್ಲಿ ಈ ಯೋಜನೆಗಳ ಕಾರ್ಯನಿರ್ವಹಣೆ, ಕ್ಷಮತೆ, ಸುಸ್ಥಿರತೆ ಹಾಗೂ ಅವುಗಳ ಸ್ಥಿತಿಸ್ಥಾಪಕತ್ವದ ಬಗೆಗೆ ಅಧ್ಯಯನ ಮಾಡಬೇಕಿದೆ. ಹಾಗೂ ಬದಲಾದ ಸನ್ನಿವೇಶಗಳಲ್ಲಿ ಈ ಯೋಜನೆಗಳನ್ನು ಯಾವ ರೀತಿ ಅಳವಡಿಸಿಕೊಳ್ಳಬಹುದೆಂಬ ಬಗೆಗೆ. ಚರ್ಚೆ, ಸಮಾಲೋಚನೆಗಳ ಅಗತ್ಯತೆ ಇದೆ ಎಂದರು
ಡಾ.ವೆಂಕಟೇಶ, ವಿಲಾಸ್ ಬದಾಮಿ, ಎಸ್.ಎಂ.ಮೇಟಿ, ಎಸ್.ವೈ.ಕುಂದರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7