Breaking News

ಕಲಬುರಗಿ | ಮೂರು ಸೇತುವೆ ಮುಳುಗಡೆ: ಹಲವೆಡೆ ಸಂಪರ್ಕ ಕಡಿತ

Spread the love

ಕಾಳಗಿ: ಕಳೆದ ಮೂರುದಿನಗಳಿಂದ ತಾಲ್ಲೂಕಿನೆಲ್ಲೆಡೆ ಸುರಿಯುತ್ತಿರುವ ಮಳೆ ಮತ್ತು ಹೇರೂರ ಬೆಣ್ಣೆತೊರಾ ಜಲಾಶಯದ ನೀರಿನ ಪ್ರವಾಹಕ್ಕೆ ಮೂರು ಸೇತುವೆಗಳು ಮುಳುಗಡೆಯಾಗಿ ಹಲವೆಡೆ ಸಂಪರ್ಕ ಕಡಿತಗೊಂಡಿದೆ.

ಮಲಘಾಣ-ಕಾಳಗಿ, ಕಲಗುರ್ತಿ-ಡೊಣ್ಣೂರ ಮತ್ತು ತೆಂಗಳಿ-ತೆಂಗಳಿ ಕ್ರಾಸ್ ನಡುವಿನ ರಸ್ತೆ ಸಂಪರ್ಕದ ಹಳ್ಳದ ಸೇತುವೆಗಳು ನೀರಿನ ಪ್ರವಾಹಕ್ಕೆ ಭಾನುವಾರದಿಂದಲೇ ಮುಳುಗಿ ಹೋಗಿವೆ.

ಪರಿಣಾಮ ಮಲಘಾಣ, ಕಲಗುರ್ತಿ, ಚಿತ್ತಾಪುರ ರಸ್ತೆ ಮಾರ್ಗದ ಸಂಪರ್ಕ ಕಡಿತಗೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ.

ಕಣಸೂರ, ಹೆಬ್ಬಾಳ, ಶೆಳ್ಳಗಿ, ಹೇರೂರ, ಮಲಘಾಣ, ಡೊಣ್ಣೂರ, ಅರಜಂಬಗಾ, ತೆಂಗಳಿ, ತೊನಸನಹಳ್ಳಿ (ಟಿ), ಗೋಟೂರ, ಅಶೋಕನಗರ, ಚಿಂಚೋಳಿ ಎಚ್, ಬಣಬಿ, ಕಲ್ಲಹಿಪ್ಪರ್ಗಾ, ಕಂಚನಾಳ, ರಾಜಾಪುರ, ಭರತನೂರ ಹಳ್ಳದ ದಂಡೆಯ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ತೊಗರಿ, ಉದ್ದು, ಹೆಸರು ಬೆಳೆ ಹಾಳಾಗಿದೆ. ಹೆಬ್ಬಾಳ, ಕಲಗುರ್ತಿ, ತೆಂಗಳಿ, ರಾಜಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ತೆಂಗಳಿಯ ಅಂಬಿಗರ ಚೌಡಯ್ಯ ದೇವಸ್ಥಾನ ಜಲಾವೃತಗೊಂಡಿದೆ.

ಶ್ರಾವಣಮಾಸದ ಕಡೆಯ ಸೋಮವಾರ ಐತಿಹಾಸಿಕ ಕಾಳಗಿ ನೀಲಕಂಠ ಕಾಳೇಶ್ವರ, ಕೋರವಾರ ಅಣಿವೀರಭದ್ರೇಶ್ವರ, ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ, ಸುಗೂರಿನ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದುಹೋಗಲು ಭಕ್ತರು ಮಳೆಯಲ್ಲೆ ಪರದಾಡಿದರು. ವಾರದ ಸಂತೆಗೆ ಪಟ್ಟಣದಲ್ಲಿ ವ್ಯಾಪಾರಸ್ಥರು ಮತ್ತು ಗ್ರಾಹಕರು ಮಳೆನೀರಿನ ಗಿಜಿಗಿಜಿ ಅನುಭವಿಸಿದರು.


Spread the love

About Laxminews 24x7

Check Also

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಚಿಸಿ ಒಂದೂವರೆ ವರ್ಷವಾಯಿತು, ಬಿಜೆಪಿಯವರು ನಿದ್ರಿಸುತ್ತಿದ್ದರೇ? ಲಕ್ಷ್ಮಿ ಹೆಬ್ಬಾಳ್ಕರ್

Spread the loveಬೆಂಗಳೂರು, ಮಾರ್ಚ್​ 12 : ಸದನದಲ್ಲಿ ಹಲವಾರು ಚರ್ಚೆಗಳಾಗಬೇಕಿದೆ, ಅನುದಾನ ಹಂಚಿಕೆಯಲ್ಲಿ (grants distribution) ಯಾವುದಾದರೂ ಪ್ರಾಂತ್ಯಕ್ಕೆ ಅನ್ಯಾಯವಾಗಿದೆಯಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ