ಸಂಬರಗಿ: ಶಿರೂರು, ಪಾಂಡೇಗಾಂವ್, ಜಂಬಗಿ, ಸಂಬರಗಿ, ಜಕಾರಟಿ ಸೇರಿದಂತೆ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಕೃಷಿ ಜಮೀನಿಗೂ ನೀರಿನ ಕೊರತೆ ಕಾಡುತ್ತಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ರೈತರು ಅಗ್ರಹಿಸಿದ್ದಾರೆ. ಜಲ ಜೀವನ ಯೋಜನೆಯಡಿ ನಿರಂತರ ನೀರು ಸರಬರಾಜು ಸ್ಥಗಿತಗೊಂಡಿದೆ. ಜಿಲ್ಲಾಡಳಿತ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ, ಅಧಿಕಾರಿಗಳು ಸೂಚನೆ ಪಾಲಿಸುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ದಿನೇದಿನೆ ಹೆಚ್ಚುತ್ತಿದೆ. ತೋಟಪಟ್ಟಿ ಪ್ರದೇಶದಲ್ಲಿನ ಮಹಿಳೆಯರು ನೀರು ತರಲು ಕಿ.ಮೀ.ಗಟ್ಟಲೇ ನಡೆದು ಹೋಗಬೇಕಿದೆ. ಸಂಬಂಧಪಟ್ಟವರು ನೀರು ಪೂರೈಕೆಗೆ ತುರ್ತು ಕ್ರಮವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Laxmi News 24×7