ಬೆಳಗಾವಿ: ಕೇಂದ್ರ ಸರ್ಕಾರ ಹೊಸದಾಗಿ ಅನುಷ್ಠಾನಗೊಳಿಸಿರುವ ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ-ಜಿರಾಮ್ಜಿ) ಯೋಜನೆ ಕುರಿತು ಹಳ್ಳಿಗಳಲ್ಲಿ ಜಾಗೃತಿ ಸಭೆ ನಡೆಸಲು ಸಂಘಟನಾತ್ಮಕ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
ನಗರದ ಬಿಜೆಪಿ ಗ್ರಾಮೀಣ ಕಚೇರಿಯಲ್ಲಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ಮತಕ್ಷೇತ್ರವಾರು ಸಂಘನಾತ್ಮಕ ಸಭೆಯಲ್ಲಿ ವಿಬಿ-ಜಿರಾಮ್ಜಿ, ಮತಪಟ್ಟಿ ಪರಿಷ್ಕರಣೆ (ಎಸ್ಐಆರ್) ಸಭೆ, ಗ್ರಾಪಂ, ಜಿಪಂ, ತಾಪಂ ಚುನಾವಣೆ ಸಿದ್ದತೆ ಹಾಗೂ ಪಕ್ಷ ಸಂಘಟನೆ ಕುರಿತು ಹಲವು ವಿಷಯ ಕುರಿತು ಚರ್ಚಿಸಿದರು.
ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಾಗಿ ಬೂತ ಮಟ್ಟದಲ್ಲಿಯೇ ಪಕ್ಷ ಸಂಘಟಿಸಿಬೇಕು. ಪಕ್ಷದ ಪದಾಧಿಕಾರಿ, ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ಸಭೆ ಆಯೋಜಿಸಿ ಕೇಂದ್ರ ಸರ್ಕಾರ ಯೋಜನೆ ಕುರಿತು ಜಾಗೃತಿ ಮೂಡಿಸಬೇಕು. 500 ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ವಾರ್ಡ್ ಮಟ್ಟದ ಸಭೆ ನಡೆಸಿ ಜನರಿಗೆ ಅರಿವು ಮೂಡಿಸಬೇಕು. ಜತೆಗೆ ರಾಜ್ಯಕಾಂಗ್ರೆಸ್ ಸರ್ಕಾರದ ದುರಾಡಳಿತ ಬಗ್ಗೆ ತಿಳಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲಾ ರಾಜಕಾರಣ ಅತಿಹೆಚ್ಚು ಪ್ರಭಾವ ಹೊಂದಿದ್ದು, ಬಿಜೆಪಿ ಸಂಘಟನೆ ಮತ್ತಷ್ಟು ಗಟ್ಟಿಗೊಳಿಸಬೇಕಿದೆ.ಆ ನಿಟ್ಟಿನಲ್ಲಿ ಮನೆ ಮನೆಗೆ, ಹಳ್ಳಿಗಳಿಗೆ ತೆರಳಿ ಪಕ್ಷ ಸಂಘಟನೆ, ಕೇಂದ್ರ ಸರ್ಕಾರದ ಯೋಜನೆ ಕುರಿತು ಸಭೆ ನಡೆಸಿ ಜನರಿಗೆ ತಿಳುವಳಿಕೆ ನೀಡಬೇಕು. ಇದಕ್ಕಾಗಿ ಪದಾಧಿಕಾರಿ, ಕಾರ್ಯಕರ್ತರು, ಹಾಲಿ, ಮಾಜಿ ಶಾಸಕರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಸಕ ವಿಠ್ಠಲ ಹಲಗೇಕರ,ಮಾಜಿ ಶಾಸಕರಾದ ಸಂಜಯ ಪಾಟೀಲ್,ಡಾ.ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ, ಧನಶ್ರೀ ದೇಸಾಯಿ, ಬಸವರಾಜ ಯಂಕಂಚಿ ಇತರರಿದ್ದರು.
Laxmi News 24×7