ಬೆಳಗಾವಿ: ಖಾನಾಪುರ ತಾಲೂಕಿನ ಶಾಹುನಗರದಲ್ಲಿ ಡೊಂಬರ ಸಮುದಾಯದ ಸ್ಮಶಾನ ಭೂಮಿ ಕಬಳಿಸುವ ಹುನ್ನಾರ ನಡೆದಿದ್ದು, ಇದನ್ನು ಉಳಿಸಿಕೊಡುವಂತೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿಯಲ್ಲಿ ಆಗಮಿಸಿದ ನಿವಾಸಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ರಿಗೆ ಮನವಿ ಸಲ್ಲಿಸಿದರು.
ಖಾನಾಪುರ ತಾಲೂಕಿನ ಶಾಹುನಗರದ ಸರ್ವೆ ನಂ 39/ಎ1 ರಲ್ಲಿ ಬರುವ ಪ್ರದೇಶದಲ್ಲಿ ಪೂರ್ವಜರ ಕಾಲದಿಂದಲೂ ಡೊಂಬರ ಸಮುದಾಯದವರು ಮರಣ ಹೊಂದಿದಾಗ ಶವಸಂಸ್ಕಾರವನ್ನು ಮಾಡಿಕೊಂಡು ಬಂದಿದ್ದೇವೆ. ಇದು ಸರ್ಕಾರಿ ಗಾಯರಾಣ ಜಮೀನಾಗಿದ್ದರೂ ಕೆಲವರು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಇಲ್ಲಿರುವ ಕೆಲ ಮರ ಕಡೆದು ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಈ ಸ್ಮಶಾನಭೂಮಿ ವಿಷಯವಾಗಿ ತಹಸೀಲ್ದಾರ ಮತ್ತು ಪಟ್ಟಣ ಪಂಚಾಯಿತಿಗೆ ಹತ್ತಾರು ಸಲ ಮನವಿ ಸಲ್ಲಸಿದರೂ ಪ್ರಯೋಜನವಾಗಿಲ್ಲ. ಈಗ ಅತಿಕ್ರಮಣಕಾರರು ಬಂದಿದ್ದು, ಈ ಜಮೀನಿನ ಕುರಿತು ಇನ್ನಾದರೂ ಸೂಕ್ತ ಸಮೀಕ್ಷೆ ನಡೆಸಿ, ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಮಲ್ಲೇಶ ಚೌಗುಲೆ, ರಾಜಶೇಖರ ಹಿಂಡಲಗಿ, ರಾಘವೇಂದ್ರ ಚಲವಾದಿ, ವಿಠ್ಠಲ ಸಗರಮ್ಮನವರ, ದುರ್ಗಪ್ಪ ದಂಡಿನವರ, ರಾಜು ಸೊಂಟಕ್ಕಿ, ಸುಬ್ರಹ್ಮಣ್ಯ ಕಾಂಬಳೆ, ಸಂದೀಪ ಕೋಲಕಾರ, ರವಿ ಮಾದರ, ಕಾರ್ತಿಕ ತಳವಾರ ಇತರರಿದ್ದರು.
Laxmi News 24×7