ಬೈಲಹೊಂಗಲ: ವೀರವನಿತೆ ರಾಣಿ ಚನ್ನಮ್ಮಾಜಿ ಐಕ್ಯ ಸ್ಥಳದಲ್ಲಿರುವ ರಾಕ್ ಗಾರ್ಡನ್ ಯಾರಿಗೂ ಹೇಳದೆ ಉದ್ಘಾಟನೆ ಮಾಡಿ, ಶಾಸಕರು ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಅದ್ದೂರಿ ಕಾರ್ಯಕ್ರಮದೊಂದಿಗೆ ಮುಖ್ಯಮಂತ್ರಿಗಳನ್ನು ಕರೆಸಿ ರಾಕ್ ಗಾರ್ಡನ್ ಉದ್ಘಾಟಿಸಬೇಕು, ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ರಾಕ್ ಗಾರ್ಡನ್ ಉದ್ಘಾಟನೆ ವೇಳೆ ರಾಣಿ ಚನ್ನಮ್ಮಾಜಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ಕನ್ನಡ, ರೈತ ಪರ ಸಂಘಟನೆ ಹಾಗೂ ಹಲವು ಸಂಘ ಸಂಸ್ಥೆಗಳು, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತತ್ವದಲ್ಲಿ ಸೋಮವಾರ ಕರೆ ನೀಡಿದ್ದ ಬೈಲಹೊಂಗಲ ಬಂದ್ ವೇಳೆ ಮಾತನಾಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ನೂರಾರು ಕೋಟಿ ರೂ. ವೆಚ್ಚದಲ್ಲಿ ನಂದಗಡದಲ್ಲಿ ರಾಕ್ ಗಾರ್ಡನ್ ನಿರ್ಮಾಣ ಮಾಡಿ, ಅದ್ದೂರಿ ಕಾರ್ಯಕ್ರಮ ಮಾಡಿ ಲೋಕಾರ್ಪಣೆ ಗೊಳಿಸಿದ್ದಾರೆ. ಆದರೆ, ರಾಣಿ ಚನ್ನಮ್ಮಾಜಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು. ನಗರದ ಕೇಂದ್ರ ಬಸ್ ನಿಲ್ದಾಣದ ಕರೆಮ್ಮದೇವಿ ದೇವಸ್ಥಾನ ಹತ್ತಿರ ಸೇರಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಶಾಸಕ ಮಹಾಂತೇಶ ಕೌಜಲಗಿ ವಿರುದ್ಧ ಧಿಕ್ಕಾರ ಕೂಗಿದರು.
ಅಂಗಡಿ ಬಂದ್ ಮಾಡಿಸುವ ವೇಳೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಹಾಗೂ ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು ಪ್ರತಿಭಟನಾಕಾರರು ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಬಸ್ ಸಂಚಾರಕ್ಕೆ ತೊಂದರೆ ಮಾಡಲಿಲ್ಲ.
ಮಾಜಿ ಜಿಪಂ ಸದಸ್ಯ ಬಿ.ಎಂ.ಚಿಕ್ಕನಗೌಡ್ರ, ಸಮಾಜ ಸೇವಕ ರಫೀಕ್ ಬಡೇಘರ, ಮಡಿವಾಳಪ್ಪ ಹೋಟಿ, ಮುರಗೇಶ ಗುಂಡ್ಲೂರ, ರಾಜು ಕುಡಸೋಮನ್ನವರ, ನಿಂಗಪ್ಪ ಚೌಡನ್ನವರ, ಸುನೀಲ ವರ್ಣೇಕರ, ಸುಭಾಸ ಬಾಗೇವಾಡಿ, ದುಂಡೇಶ ಗರಗದ, ಶ್ರೀಶೈಲ ಯಡಳ್ಳಿ, ಮಹಾಂತೇಶ ಗುಂಡ್ಲೂರ, ನಾಗಪ್ಪ ಗುಂಡ್ಲೂರ, ರಿತೇಶ ಪಾಟೀಲ, ಬಸವರಾಜ ಬೋಳಗೌಡರ, ಕ್ರುಸಾಬ್ ಕುಸಲಾಪುರ, ಬಸವರಾಜ ಭಜಂತ್ರಿ, ಶಾಂತಾ ಮಡ್ಡಿಕಾರ, ರತ್ನಾ ಗೋಧಿ, ಬಾಳನಗೌಡ ಪಾಟೀಲ, ವಿರೇಶ ಹೊಳೆಪ್ಪನ್ನವರ, ಮಲ್ಲಿಕಾರ್ಜುನ ಹುಂಬಿ, ಶ್ರೀಶೈಲ ಶರಣಪ್ಪನವರ, ರಾಜು ಬೋಳನ್ನವರ, ಶಿವಾನಂದ ಕುರಬೆಟ್ಟ, ಉಮೇಶಗೌಡ ಪಾಟೀಲ, ದಯಾನಂದ ಚಿಕ್ಕಮಠ, ಮಲ್ಲಿಕಾರ್ಜುನ ಬಾಜಿ, ಚಂದನ ಕೌಜಲಗಿ, ಶಿವು ಶಿರಸಂಗಿ, ಗಂಗಪ್ಪ ಗುಗ್ಗರಿ, ಈರಣ್ಣ ಹರಕುಣಿ, ರಾಜು ನರಸಣ್ಣವರ, ಆನಂದ ಮೂಗಿ ಇತರರು ಇದ್ದರು.
Laxmi News 24×7