ಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು ಅಭಿಯಾನದ ಮಾದರಿ ಯಲ್ಲಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯಲ್ಲಿ ಅವರು, ರಾಜ್ಯದಲ್ಲಿ 20 ಲಕ್ಷ ಬಾಂಗ್ಲಾ ದೇಶದ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
ಕೇಂದ್ರ ವಿದೇಶಾಂಗ ಸಚಿವಾಲಯದ ಎಫ್ ಆರ್ ಆರ್ ಓ ಸಂಸ್ಥೆ ಬೆಂಗಳೂರಿನಲ್ಲಿದೆ. ಅವರ ದಾಖಲಾತಿಯಲ್ಲಿ 20 ಲಕ್ಷ ಜನ ಅಕ್ರಮವಾಗಿ ನೆಲೆಸಿರುವ ಮಾಹಿತಿ ಇಲ್ಲ. ಒಂದು ವೇಳೆ ರಿಜಿಸ್ಟರ್ ಪುಸ್ತಕದಲ್ಲಿ ನೋಂದಣಿಯಾಗದೆ ಹೊರಗುಳಿದಿರುವವರನ್ನು ಪತ್ತೆ ಹಚ್ಚಿ , ಗಡೀಪಾರು ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ಅಕ್ರಮವಾಗಿ ನೆಲೆಸಿದ್ದ 390 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದರು.
ವಿಧಾನ ಮಂಡಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಚಿವರು, ಶಾಸಕರು ಸಭೆ ನಡೆಸಿದ್ದೇವೆ. ಎಸ್ಇಪಿ, ಟಿಎಸ್ಪಿ ಯೋಜನೆಯಡಿ ಕಳೆದ ಬಜೆಟ್ನಲ್ಲಿ 42 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಆದರೆ ಅದು ಎಲ್ಲಾ ಇಲಾಖೆಗಳ ನಡುವೆ ಹಂಚಿಕೆಯಾಗಿದೆ. ಯಾವ ಇಲಾಖೆಯಲ್ಲಿ ಎಷ್ಟು ಖರ್ಚಾಗಿದೆ ಎಂಬ ನಿಖರ ಮಾಹಿತಿ ಸಿಗುತ್ತಿಲ್ಲ. ಫಲಾನುಭವಿಗಳಿಗೂ ಸೌಲಭ್ಯ ದೊರೆಯುತ್ತಿಲ್ಲ ಎಂಬ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಈ ಮೊದಲು ಎಸ್ಇಪಿ, ಟಿಎಸ್ಪಿ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗುತ್ತಿತ್ತು. ಅಲ್ಲಿಂದ ಕಾರ್ಯಕ್ರಮ ರೂಪಿಸಲಾಗುತ್ತಿತು. ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ವಾಹನ ಖರೀದಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಫಲಾನುಭವಿಗಳಿಗೂ ನೇರವಾಗಿ ಸೌಲಭ್ಯ ಸಿಗುತ್ತಿತ್ತು. ಈಗ ಮತ್ತೆ ಮೊದಲಿನ ವ್ಯವಸ್ಥೆಯಂತೆ ಸಮಾಜ ಕಲ್ಯಾಣ ಇಲಾಖೆಗೆ ಅನುದಾನವನ್ನು ಒದಗಿಸಬೇಕು.
ಅಲ್ಲಿಂದ ಹಂಚಿಕೆ ಮಾಡಬೇಕು ಎಂಬುದು ಎಲ್ಲಾ ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ. ಅದನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಎಸ್ಇಪಿ, ಟಿಎಸ್ಪಿ ಹಣ ಬಳಕೆಯಾಗುವುದನ್ನು ತಪ್ಪಿಸಲು ಇದು ಉತ್ತಮ ಮಾರ್ಗವಾಗಿದೆ ಎಂದರು.
ನಮ ಮೆಟ್ರೋ ಸಂಸ್ಥೆ ಸ್ವಾಯತ್ತವಾಗಿದೆ. ಅದರಲ್ಲೂ ಮೆಟ್ರೋ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಾಲು ಇದೆ. ಮೆಟ್ರೋ ರೈಲು ನಿರ್ವಹಣೆಗಾಗಿ ರಚಿಸಲಾಗಿರುವ ಸಿಎಂಡಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಯಾಣ ದರ ಪರಿಷ್ಕರಣೆ ಮಾಡಿರಬಹುದು ಎಂದರು.ರಾಜ್ಯ ಸರ್ಕಾರ ದಿವಾಳಿಯಾಗಿದೆ, ಹೊಸ ಯೋಜನೆಗಳು ಘೋಷಣೆಯಾಗುವುದಿಲ್ಲ ಎಂದು ಬಜೆಟ್ ಮಂಡನೆಗೂ ಮುನ್ನವೇ ಲೇವಡಿ ಮಾಡುತ್ತಿರುವವರು ಬೇಜಾವಾಬ್ದಾರಿ ಜನ ಎಂದು ತರಾಟೆಗೆ ತೆಗೆದುಕೊಂಡರು.
2024-25ನೇ ಸಾಲಿಗೆ 3.97 ಲಕ್ಷ ಕೋಟಿ, 2025-26ನೇ ಸಾಲಿಗೆ 4.9 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲಾಗಿತ್ತು. ಪ್ರತಿ ವರ್ಷದ ಬಜೆಟ್ ನಲ್ಲೂ ಶೇಕಡಾ 15 ರಷ್ಟು ಹೆಚ್ಚಳವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ನಲ್ಲಿ ಈ ರೀತಿಯ ಏರಿಕೆ ಸಾಮಾನ್ಯ ಎಂದರು.
ಸಚಿವ ಆರ್.ಬಿ.ತಿಮಾಪುರ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಒದಗಿಸಲು ವಿರೋಧ ಪಕ್ಷಗಳು ವಿಫಲವಾಗಿವೆ. ಯಾರೋ ಮಾತನಾಡಿರುವ ಆಡಿಯೋವನ್ನು ಸಿಡಿಯಲ್ಲಿ ತಂದು ಪ್ರಸ್ತಾಪ ಮಾಡಿದರೆ ಒಪ್ಪಲು ಸಾಧ್ಯವಿಲ್ಲ. ಸಚಿವ ಆರ್.ಬಿ.ತಿಮಾಪುರ್ ನಾನು ನೇರವಾಗಿ ಹಣ ಪಡೆದಿರುವುದು ಅಥವಾ ನನ್ನ ಕಚೇರಿಯಲ್ಲಿ ಲಂಚ ಪಡೆಯುವ ಮಾತುಕತೆಯಾಗಿದ್ದರೆ ಅದನ್ನು ಸಾಬೀತುಪಡಿಸಿ.
ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಯಾರೋ ಮಾತನಾಡಿಕೊಂಡಿದ್ದರೆ ಅದರಲ್ಲಿ ನನ್ನ ಪಾತ್ರ ಏನಿರುತ್ತದೆ? ನಾನ್ಹೇಗೆ ಹೊಣೆಯಾಗುತ್ತೇನೆ ಎಂದು ತಿಮಾಪುರ ಪ್ರಶ್ನಿಸಿದ್ದಾರೆ. ವಿರೋಧ ಪಕ್ಷದವರು ಇದೇ ರೀತಿ ಪ್ರತಿದಿನ ಒಬ್ಬೊಬ್ಬ ಸಚಿವರ ವಿರುದ್ಧ ಸಿಡಿ ತರುತ್ತಾರೆ. ಅದನ್ನು ಒಪ್ಪಬೇಕಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ನಿವೇಶನ ಹಂಚಿಕೆ ಮಾಡುತ್ತಿರುವುದು ಸರ್ಕಾರದ ತೀರ್ಮಾನ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಕಚೇರಿಗಳಿಗೆ ನಿವೇಶನಗಳನ್ನು ಮಾಡಿಸಿಕೊಳ್ಳಲಾಗಿದೆ. ಇದು ವೈಯಕ್ತಿಕ ನಿರ್ಧಾರವಲ್ಲ. ಸರ್ಕಾರದ ತೀರ್ಮಾನ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಿದ್ದಾರೆ. ಮೊದಲಿಗೆ ಗೃಹ ಇಲಾಖೆಯ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರ ಬಗ್ಗೆ ಪ್ರಸ್ತಾವನೆಗಳನ್ನು ಸಿದ್ಧಪಡಿಸಿದ್ದೇವೆ. ಹೊಸ ನೇಮಕಾತಿ ಮತ್ತು ಪೊಲೀಸ್ ಠಾಣೆಗಳನ್ನು ನೀಡಬೇಕು ಎಂಬುದು ನಮ ಬೇಡಿಕೆಯಾಗಿದೆ ಎಂದರು.
ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸಿ ವಿಧಾನಮಂಡಲದಲ್ಲಿ ಕೈಗೊಂಡಿರುವ ನಿರ್ಣಯದ ಸಂವಿಧಾನ ಬಾಹಿರ ಅಲ್ಲ. ಚುನಾಯಿತ ಸರ್ಕಾರ ಬಹುಮತದಿಂದ ಅಂಗೀಕರಿಸುವ ನಿರ್ಣಯ ಹೇಗೆ ಅಕ್ರಮವಾಗುತ್ತದೆ? ಎಂದು ಪ್ರಶ್ನಿಸಿದರು.
Laxmi News 24×7