ಬೆಂಗಳೂರು: ಐಪಿಎಲ್ ಪಂದ್ಯಕ್ಕೆ ಕೇವಲ ಮೂರೇ ದಿನ ಬಾಕಿಯಿರುವ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಣಹೋಮ ನೆರವೇರಿಸಲಾಯ್ತು.
ಕಳೆದ ವರ್ಷ ನಡೆದ 11 ಆರ್ಸಿಬಿ ಅಭಿಮಾನಿಗಳ ದಾರುಣ ಸಾವು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಮುಂದೆ ಇಂತಹ ಯಾವುದೇ ಅವಘಡ ಆಗದೇ ಇರಲಿ ಎಂದು ಮೃತ್ಯುಂಜಯ ಹೋಮ, ಗಣಪತಿ ಹೋಮ, ಲಕ್ಷ್ಮಿ ಹೋಮ ನೆರವೇರಿಸಲಾಯ್ತು. ಪೂಜೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೇರಿ ಹಲವರು ಭಾಗವಹಿಸಿದ್ರು. ಕ್ರೀಡಾಂಗಣದ ಗೇಟ್ಗಳಿಗೆ ಬೂದಗುಂಬಳಕಾಯಿ ಒಡೆದು ದೃಷ್ಟಿ ತೆಗೆಯಲಾಯ್ತು.
ಅಷ್ಟೇ ಅಲ್ಲದೇ ಕಳೆದ ವರ್ಷ ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳ ನೆನಪಿಗಾಗಿ ಕೆಎಸ್ಸಿಎ ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲೇ ಸ್ಮಾರಕ ನಿರ್ಮಾಣ ಮಾಡಿದೆ. ʻಮೆಮೋರಿ ಆಫ್ ಫ್ಯಾನ್ಸ್ ಜೂನ್-4 2025ʼ ಎಂದು ಸ್ಮಾರಕದ ಮೇಲೆ ಬರಹ ಬರೆಯಲಾಗಿದೆ.
ಇನ್ನು 11 ಜನರ ನೆನಪಿಗಾಗಿ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11 ಸೀಟುಗಳನ್ನ ಖಾಲಿ ಬಿಡೋದಾಗಿ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಆ ಸೀಟ್ನ ಟಿಕೆಟ್ಗಳನ್ನ ಯಾವತ್ತೂ ಮಾರಾಟ ಮಾಡಲ್ಲ ಎಂದು ಘೋಷಿಸಿದ್ದಾರೆ.
ಇಂತಹ ದುರ್ಘಟನೆ ನಡೆಯದಂತೆ ನೋಡಿಕೊಳ್ತೇವೆ
ಇನ್ನೂ ಸ್ಮಾರಕ ಉದ್ಘಾಟನೆ ನೆರವೇರಿಸಿದ ಬಳಿಕ ಗೃಹಸಚಿವ ಜಿ. ಪರಮೇಶ್ವರ್ ಮಾತನಾಡಿ, ಕಳೆದ ವರ್ಷ ಆರ್ಸಿಬಿ ವಿಜಯೋತ್ಸವದ ಇದೇ ಸ್ಟೇಡಿಯಂ ಬಳಿ ದುರಂತ ನಡೆದಿತ್ತು. ಇದರಿಂದ ಕೆಎಸ್ಸಿಎ ಮತ್ತು ಸರ್ಕಾರ ಟೀಕೆಗೆ ಒಳಗಾಗಿತ್ತು. ಕುನ್ಹಾ ವರದಿ ಪ್ರಕಾರ, ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಕೆಎಸ್ಸಿಎಗೆ ಅಭಿನಂದನೆ ಸಲ್ಲಿಸ್ತಿನಿ. ಸಾವನ್ನಪ್ಪಿದವರಿಗಾಗಿ ವಿಶೇಷ ಆಸನ ವ್ಯವಸ್ಥೆ ಕೂಡ ಮಾಡಲಾಗಿದೆ. ಸ್ಮಾರಕವನ್ನ ಕೂಡ ಉದ್ಘಾಟನೆ ಮಾಡಿದ್ದಾರೆ. ಮಾರ್ಚ್ 28 ರಂದು ನಡೆಯುವ ಐಪಿಎಲ್ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಇಂತಹ ದುರ್ಘಟನೆ ಮರುಕಳಿಸದ ಹಾಗೇ ನಡೆದುಕೊಳ್ತವೆ ಎಂದು ಭರವಸೆ ನೀಡಿದ್ದಾರೆ.
Laxmi News 24×7