ಶಿವಮೊಗ್ಗ: ಪತಿ ಸಾವಿನ ಬಳಿಕ ಪೇದೆ ನೀಡುತ್ತಿದ್ದ ಕಿರುಕುಳ, , ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಅಪಪ್ರಚಾರ ತಾಳಲಾಗದೇ ಪೊಲೀಸ್ ಸಿಬ್ಬಂದಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ವಾಟ್ಸಪ್ನಲ್ಲಿ ಡೆತ್ನೋಟ್ನಲ್ಲಿ ಪತ್ತೆಯಾಗಿದ್ದು, ಪೇದೆ ಮೋಹನ್ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ.
ಮೃತ ಸ್ವಾತಿ ಹಾಗೂ ಜಗದೀಶ್ 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದರು. ಜಗದೀಶ್ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಅನುಕಂಪದ ಆಧಾರದ ಮೇಲೆ ಜಗದೀಶ್ಗೆ ಕೆಲಸ ಸಿಕ್ಕಿತ್ತು. ಕಳೆದ ಹತ್ತು ವರ್ಷಗಳಿಂದ ಕೆಎಸ್ಐಎಸ್ಎಫ್ನಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಫೆ.14ರಂದು ಕರ್ತವ್ಯ ನಿಮಿತ್ತ ಜಗದೀಶ್ ಚಿತ್ರದುರ್ಗಕ್ಕೆ ಹೋಗಿ ಬಂದಿದ್ದರು. ರಾತ್ರಿ 9 ಗಂಟೆ ಮನೆಗೆ ಬಂದು ಅಡುಗೆ ಮಾಡುವಂತೆ ಪತ್ನಿಗೆ ತಿಳಿಸಿ ಮಹಡಿ ಮೇಲಿನ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅತಿಯಾದ ಮದ್ಯ ಸೇವನೆ, ಹೊಟ್ಟೆ ನೋವಿನಿಂದ ಜಗದೀಶ್ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಶಂಕಿಸಿದ್ದರು.
ಜಗದೀಶ್ ಸಾವನ್ನಪ್ಪುತ್ತಿದ್ದಂತೆ ಪೊಲೀಸ್ ಪೇದೆ ಮೋಹನ್ ಸ್ವಾತಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಮೊದಲು ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದ್ದ. ಆಗ ಸ್ವಾತಿ ಆತನ ಆಕೌಂಟ್ ಬ್ಲಾಕ್ ಮಾಡಿದ್ದರು. ಇದಕ್ಕೆ ಕೋಪಗೊಂಡು ಬೇರೆ ಅಕೌಂಟ್ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಿದ್ದ. ಈತನ ಕಾಟ ತಾಳಲಾರದೆ ಡೆತ್ನೋಟ್ ಬರೆದಿಟ್ಟು ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ನೋಟ್ನಲ್ಲಿ ಅಮ್ಮ ಸಾರಿ, ನನ್ನ ಬಗ್ಗೆ ಇಲ್ದೇ ಇರೋದಲ್ಲ ಕೆಟ್ಟದಾಗಿ ಜನಗಳ ಹತ್ತಿರ ಹೇಳಿದ್ರೆ ನಂಗೆ ತಡಿಯೋಕೆ ಆಗ್ತಿಲ್ಲ. ಅವನನ್ನ ಮಾತ್ರ ಸುಮ್ನೆ ಬಿಡಬೇಡಿ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ ಪ್ಲೀಸ್ ಎಂದು ಬರೆದುಕೊಂಡಿದ್ದಾರೆ. ಈ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆ ಎಫ್ಐಆರ್ ದಾಖಲಾಗಿದೆ.
Laxmi News 24×7