ಬೆಳಗಾವಿ : ನಗರದ ಸುರಣ್ಣವರ ಆಸ್ಪತ್ರೆಯಲ್ಲಿ ರೋಬೋಟಿಕ್ ಜಾಯಿಂಟ್ ರಿಪ್ಲೆಸ್ಮೆಂಟ್ ಶಸ್ತ್ರಚಿಕಿತ್ಸಾ ವ್ಯವಸ್ಥೆ ಅಳವಡಿಸಿಕೊಂಡು ಯಶಸ್ವಿಯಾಗಿ ಸರ್ಜರಿಗಳನ್ನು ಮಾಡುವ ಮೂಲಕ ಆಧುನಿಕ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಆರ್ಥೋಪಿಡಿಕ್ ಸರ್ಜನ್ ಡಾ.ಜಗದೀಶ ಸುರಣ್ಣವರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯಿಂದ ಇಂಪ್ಲಾಂಟ್ಗಳನ್ನು ಸರಿಯಾದ ಸ್ಥಾನದಲ್ಲಿ ಅಳವಡಿಸುವುದು ಸುಲಭವಾಗಿದ್ದು, ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯಕವಾಗುತ್ತಿದೆ. ಆಯುಷ್ಮಾನ್ ಭಾರತ ಮತ್ತು ಯಶಸ್ವಿನಿ ಯೋಜನೆಯಡಿ ನಮ್ಮ ಆಸ್ಪತ್ರೆಯಲ್ಲಿ ಈ ನೂತನ ತಂತ್ರಜ್ಞಾನ ಶಸ್ತ್ರಚಿಕಿತ್ಸೆಯ ಲಾಭ ಪಡೆದುಕೊಳ್ಳಬಹುದಾಗಿದ್ದರಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯ ಜನ ಆಗಮಿಸುತ್ತಿದ್ದಾರೆ ಎಂದರು.
ಈವರೆಗೆ ನಾನು ಸುಮಾರು 3500ರಷ್ಟು ಜಾಯಿಂಟ್ ರಿಪ್ಲೆಸ್ಮೆಂಟ್ ಸರ್ಜರಿ ಮಾಡಿದ್ದೇನೆ. ನಮ್ಮ ಆಸ್ಪತ್ರೆಯಲ್ಲಿ ಸುಮಾರು 7 ಸಾವಿರದಷ್ಟು ಆರ್ಥೋಪಿಡಿಕ್ ಸರ್ಜರಿಗಳಾಗಿವೆ. ಈಗ ಈ ಹೊಸ ರೋಬೋಟಿಕ್ ಸಾಧನ ಬಂದ ಬಳಿಕ ಇನ್ನಷ್ಟು ಪರಿಣಾಮಕಾರಿಯಾಗಿ ರೋಗಿಗಳಿಗೆ ಸೇವೆ ನೀಡಲು ಅನುಕೂಲವಾಗಿದ್ದು, ಇದನ್ನು ಗುರುತಿಸಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯು ನನ್ನನ್ನು ಮೆಂಟರ್ ಸರ್ಜನ್ ಎಂದು ನೇಮಿಸಿಕೊಂಡಿದೆ. ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾಸ್ಪತ್ರೆಗಳಿಗೆ ತೆರಳಿ ಅಲ್ಲಿರೋ ವೈದ್ಯರಿಗೆ ತರಬೇತಿ ನೀಡಿ ಬರುತ್ತಿದ್ದೇನೆ ಎಂದು ವಿವರಿಸಿದರು.
ನಮ್ಮ ಆಸ್ಪತ್ರೆಯು ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತರಬೇತಿ ಫೆಲೋಶಿಪ್ ಆರಂಭಿಸಿದೆ. ವಿವಿಧ ದೇಶಗಳ ಆಸ್ಥಿ ತಜ್ಞರು ಇಲ್ಲಿಗೆ ಆಗಮಿಸಿ ಸಂಧಿ ಬದಲಾವಣೆ ಮತ್ತು ಟ್ರಾಮಾ ಶಸ್ತ್ರಚಿಕಿತ್ಸೆಗಳ ಉನ್ನತ ಅಧ್ಯಯನ ಮಾಡುತ್ತಿದ್ದಾರೆ. ಈಗ ರೋಮೋನಿಯಾ ದೇಶದ ಡಾ.ಡ್ರಾಗೋಸ್ ಮಿರೋಸು ಎಂಬುವವರು ಇಲ್ಲಿಗೆ ಬಂದು ಫೆಲೋಶಿಪ್ ಆರಂಭಿಸಿದ್ದಾರೆ. ಮೊದಲು ನಾವು ಯುರೋಪಕ್ಕೆ ಉನ್ನತ ಅಧ್ಯಯನಕ್ಕೆ ತೆರಳುತ್ತಿದ್ದೇವು. ಆದರೆ ಯುರೋಪಿನವರು ಈಗ ನಮ್ಮ ಆಸ್ಪತ್ರೆಗೆ ಬರುವಂತಹ ಬದಲಾವಣೆ ಮಾಡಿದ್ದೇವೆ ಎಂದು ಹೇಳಿದರು.
ಡಾ.ಸುಮಿತ ಪಾಟೀಲ, ಡಾ.ಜಾಫರ್, ಡಾ. ಡ್ರಾಗೋಸ್ ಮಿರೋಸು ಸುದ್ದಿಗೋಷ್ಠಿಯಲ್ಲಿದ್ದರು.
Laxmi News 24×7