ರಾಯಚೂರು: ಎರಡು ದಶಕಗಳ ಬಳಿಕ ರಾಯಚೂರಿನಲ್ಲಿ ನಡೆಯುತ್ತಿರುವ ಜಿಲ್ಲಾ ಉತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಫೆಬ್ರವರಿ 5, 6 ಮತ್ತು 7 ಮೂರು ದಿನಗಳ ಕಾಲ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಉತ್ಸವ ಹಿನ್ನೆಲೆ ಇಡೀ ರಾಯಚೂರು ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಕನ್ನಡ ಸಂಘದಿಂದ ಸರ್ಕಾರಿ ನೌಕರರ ಬೈಕ್ ರ್ಯಾಲಿ ನಡೆಯಲಿದೆ. 30 ಕಲಾ ತಂಡಗಳಿಂದ ಕನ್ನಡ ಸಂಘದಿಂದ ಕೃಷಿ ವಿವಿ ವೇದಿಕೆವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಬಳಿಕ ಜಿಲ್ಲಾ ಉತ್ಸವಕ್ಕೆ ಕೃಷಿ ವಿವಿ ಆವರಣದ ವೇದಿಕೆಯಲ್ಲಿ ಚಾಲನೆ ಸಿಗಲಿದೆ.
ಕೃಷಿ ವಿವಿ, ರಂಗಮಂದಿರ, ಮಹಿಳಾ ಸಮಾಜ ಆವರಣದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಕೃಷಿ ಮೇಳ , ಕವಿಗೋಷ್ಟಿ, ಸಂಸ್ಕೃತಿ ಗೋಷ್ಠಿ, ಉರ್ದು ಕವಿಗಳ ಮುಷಾಯಿರಾ, ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ. ಮಧ್ಯಾಹ್ನ ಉತ್ಸವದ ಜಾಥಾ, ಸಂಜೆ ಶ್ರೇಷ್ಠ ಕೃಷಿಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ, ರಾತ್ರಿ ಸಂಚಿತ್ ಹೆಗಡೆ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ಕಾಲ ರಾಯಚೂರು ನಗರದಲ್ಲಿ ಸಾಂಸ್ಕೃತಿಕ ವೈಭವ ಎಲ್ಲರನ್ನ ಆಕರ್ಷಿಸಲಿದೆ.
ಫೆಬ್ರವರಿ 7 ರಂದು ಪಂಚ ಗ್ಯಾರಂಟಿ ಯೋಜನೆ ಕಾರ್ಯಾಗಾರ ನಡೆಯಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Laxmi News 24×7