ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಸೌರ ವಿದ್ಯುತ ಘಟಕಕ್ಕಾಗಿ ಶ್ರೀಗಂಧ ಸಹಿತ ವಿವಿಧ ಮರಗಳನ್ನು ಅನಧಿಕೃತವಾಗಿ ಕಟಾವು ಮಾಡಿರುವ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ನಗರದ ಅರಣ್ಯ ಇಲಾಖೆ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಲಾಯಿತು.
ವಿವಿಧ ರೈತ ಸಂಘಟನೆ, ಪರಿಸರವಾದಿ, ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟಿಸಿ, ಅರಣ್ಯ ಇಲಾಖೆಯ ಅನುಮತಿ ನೀಡುವ ಮೊದಲೇ ಶ್ರೀಗಂಧದ ಮರಗಳನ್ನೂ ಕಡೆದಿದ್ದಾರೆ. ಪ್ರಕರಣ ನಡೆದ ಬಳಿಕವೇ ಅರಣ್ಯ ಇಲಾಖೆಗೂ ಗೊತ್ತಾಗಿದ್ದು, ಈ ರೀತಿ ಅಮೂಲ್ಯ ಮರಗಳನ್ನು ಕಡಿದರೂ ಇಲಾಖೆ ಗಮನ ಹರಿಸದೇ ಕರ್ತವ್ಯ ಲೋಪವೆಸಗಿದ್ದು, ಸಂಬಂಧಿತ ಅಧಿಕಾರಗಳಿಂದಲೇ ನಷ್ಟ ಭರಿಸಿ, ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ನವಿಲು ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳಿಗೆ ಇದು ನೆಲೆಯಾಗಿದೆ. 1984ರಲ್ಲಿ 600 ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿತ್ತು. ಈಗ ಕಡಿಯಲಾದ ಮರಗಳು 40 ವರ್ಷಗಳಿಗಿಂತ ಹಳೆಯವು. ಶ್ರೀಗಂಧದ ಮರಗಳಷ್ಟೇ ಮುಂದೆ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಕೊಡುತ್ತಿದ್ದವು. ಆದರೂ ಇದನ್ನೆಲ್ಲ ಕಡೆಗಣಿಸಿ ಕಟಾವು ಮಾಡಿದ್ದಾರೆ. ಇಂತಹ ದಟ್ಟ ಅರಣ್ಯವಾಗಿದ್ದರೂ, ಗೋಮಾಳ ಭೂಮಿಯಂದು ಹಂಚಿಕೆ ಮಾಡಿದ್ದಕ್ಕಾಗಿ ತಹಶೀಲ್ದಾರ ಮತ್ತು ಜಿಲ್ಲಾಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಪ್ರಕಾಶ ನಾಯ್ಕ, ಪ್ರೇಮ ಚೌಗಲಾ, ಶಿವನಗೌಡ ಪಾಟೀಲ, ಧನಂಜಯ ಜಾಧವ, ಜಗದೀಶ ಪೂಜಾರಿ ಇತರರಿದ್ದರು.
Laxmi News 24×7