ತಿರುವಂತಪುರಂ: ಮುಂಬರುವ ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ. ಕಮ್ಯುನಿಸ್ಟ್ ವಿರೋಧಕ್ಕಿಂತ ಪಕ್ಷದೊಳಗಿನ ನಾಯಕರ ನಡುವೆಯೇ ಪರಸ್ಪರ ವಿರೋಧ, ಭಿನ್ನಾಭಿಪ್ರಾಯ ಇದೆ ಎಂದು ಕಾಂಗ್ರೆಸ್ಸಿಗ ಮಣಿಶಂಕರ್ ಅಯ್ಯರ್ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ (Congress) ಗೆಲ್ಲಬೇಕೆಂದು ಬಯಸುತ್ತೇನೆ. ಆದರೆ ಕಾಂಗ್ರೆಸ್ ನಾಯಕರು ಪಕ್ಷದ ಒಳಗಡೆಯೇ ಕಚ್ಚಾಟ ನಡೆಸುತ್ತಿರುವುದರಿಂದ ಇದು ಸಾಧ್ಯವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಕಮ್ಯುನಿಸ್ಟರನ್ನು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ಪರಸ್ಪರ ದ್ವೇಷಿಸುತ್ತಾರೆ ಎಂದು ತಿವಿದಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ಇನ್ನೂ ನಾನು ಪಕ್ಷವನ್ನು ತೊರೆದಿಲ್ಲ. ರಾಹುಲ್ ಗಾಂಧಿ ನಾನು ಪಕ್ಷದ ಸದಸ್ಯ ಎಂಬುದನ್ನು ಮರೆತಿದ್ದಾರೆ. ಆದ್ದರಿಂದ ನಾನು ಗಾಂಧಿವಾದಿ, ನಾನು ನೆಹರೂವಾದಿ, ನಾನು ರಾಜೀವವಾದಿ, ಆದರೆ ನಾನು ರಾಹುಲ್ವಾದಿಯಲ್ಲ ಎಂದರು.
ತರೂರ್ ಅವರ ಬಗ್ಗೆ ಪ್ರತಿಕ್ರಿಯಿಸಿ, ಪಾಕಿಸ್ತಾನ ವಿರೋಧಿ ಮನಸ್ಥಿತಿಯನ್ನು ಹೊಂದಿರುವ ಶಶಿ ತರೂರ್ ಮುಂದಿನ ವಿದೇಶಾಂಗ ಸಚಿವನಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ ಎಂದು ಹೇಳಿದರು.
ಪವನ್ ಖೇರಾ ಅವರನ್ನು ಕೈಗೊಂಬೆ ಎಂದು ಬಣ್ಣಿಸಿದ ಅವರು ಕಳೆದ ಎರಡು ವರ್ಷಗಳಿಂದ ನನ್ನ ಮೇಲೆ ಖೇರಾ ಆರೋಪ ಮಾಡುತ್ತಲೇ ಬಂದಿದ್ದಾರೆ. ಅವರು ಪಕ್ಷದ ವಕ್ತಾರರಲ್ಲ. ಕಾಂಗ್ರೆಸ್ ಪಕ್ಷವು ಪವನ್ ಖೇರಾ ಹೊರತುಪಡಿಸಿ ಬೇರೆಯವರನ್ನು ತನ್ನ ವಕ್ತಾರರನ್ನಾಗಿ ಹುಡುಕಲು ಸಾಧ್ಯವಾಗದಿದ್ದರೆ ಅದು ಈಗಿರುವ ಸ್ಥಿತಿಯಲ್ಲೇ ಇರುತ್ತದೆ ಎಂದು ಹೇಳಿದರು.
ಮಣಿಶಂಕರ್ ಅಯ್ಯರ್ ಹೇಳಿಕೆ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಮಣಿಶಂಕರ್ ಅಯ್ಯರ್ ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಜೊತೆ ಯಾವುದೇ ಸಂಬಂಧ ಹೊಂದಿಲ್ಲ. ಅವರು ಸಂಪೂರ್ಣವಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತನಾಡುತ್ತಾರೆ ಎಂದು ಪವನ್ ಖೇರಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Laxmi News 24×7