Breaking News

ಧರ್ಮವೆಂದರೆ ಮೀಸಲಾತಿ ಹೋರಾಟವಲ್ಲ : ಬಸವಲಿಂಗಮಹಾಸ್ವಾಮಿಗಳು

Spread the love

ಬಾಗಲಕೋಟೆ: ಧರ್ಮ ಎಂದರೆ ಮೀಸಲಾತಿ ಹೋರಾಟಗಳಲ್ಲ ಅದೊಂದು ಸಾಮಾಜಮುಖಿ ಚಿಂತನೆಯ ನಡೆಯಾಗಿದ್ದು ಇತ್ತೀಚೆಗೆ ಧರ್ಮದ ಮೂಲ ಪರಿಕಲ್ಪನೆಯ ಅರಿವು ಕಡಿಮೆಯಾಗುತ್ತಿದೆ ಎಂದು ಕೊಟ್ಟೂರೇಶ್ವರ.ಹೊಸಪೇಟೆ-ಅನ್ನದಾನೀಶ್ವರ ಸಂಸ್ಥಾನಮಠದ ಹಾಲಕೆರೆಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಚರಂತಿಮಠದ ಆವರಣದಲ್ಲಿ ಶನಿವಾರ ನಡೆದ ಸಮಾಜ ಚಿಂತನ ಸಮಾರಂಭದ ದಿವ್ಯ ಸಾನಿದ್ಯವನ್ನು ವಹಿಸಿ ಹಾನಗಲ್ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿ ನಮ್ಮನ್ನು ನಾವು ಸಂಶೋಧಿಸುವುದು ಧರ್ಮವಾಗಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು ಧರ್ಮ ಮಾತನಾಡುವುದಲ್ಲ ಅದು ನಡೆಯ ಪಥವಾಗಿದೆ.ನಮ್ಮನ್ನು ನಾವು ಆತ್ಮವಲೋಕನ ಮಾಡಿಕೊಳ್ಳುವುದು ಉತ್ತಮ. ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಪರಿಕಲ್ಪನೆಯಲ್ಲಿ ನಡೆದರೆ ಧರ್ಮ ರಕ್ಷಣೆಯಾಗುತ್ತದೆ. ವ್ಯಕ್ತಿಯಿಂದ ಸಮಾಜ ನಿರ್ಮಾಣವಾಗುವುದರಿಂದ ನಮ್ಮನ್ನು ನಾವು ಅರ್ಥೈಸಿಕೊಳ್ಳಲು, ವೈಯಕ್ತಿಕ ಸುಧಾರಣೆ ಮಾಡಿಕೊಳ್ಳಬೇಕು ಇದರಿಂದ ಸಮಾಜ ಸುಧಾರಣೆಯಾಗುತ್ತದೆ. ನಿರಂತರತೆ ಮತ್ತು ಸಾಮಾಧಾನದ ನಡೆಯಿಂದ ಸಮರ್ಪಕ ಮಠಾಧಿಪತಿಗಳಾಗಲು ಸಾಧ್ಯ ಎಂದು ಸೂಚಿಸಿದರು. ಬಾಗಲಕೋಟೆ ಗುರುತಿಸಿಕೊಳ್ಳಲು ವೀರಶೈವ ವಿದ್ಯಾವರ್ಧಕ ಸಂಘದಿಂದ ಹೆಸರುವಾಸಿಯಾಗಿದ್ದು ವೀರಣ್ಣ ಚರಂತಿಮಠರ ಸೇವೆ ಮತ್ತು ನಿಸ್ವಾರ್ಥ ಭಾವನೆ ಇದಕ್ಕೆ ಕಾರಣವಾಗಿದೆ ಎಂದರು.

ಸಾಹಿತಿಗಳು, ಹೊಸಪೇಟೆ ಡಾ.ಮೃತ್ಯುಂಜಯ ರುಮಾಲೆ ಉಪನ್ಯಾಸದಲ್ಲಿ ವೀರಶೈವ ಲಿಂಗಾಯತ ಒಂದೇ ಧರ್ಮದ ಎರಡು ಹೆಸರುಗಳು ಮತ್ತು ವೀರೇಶ್ವರ-ಲಿಂಗಾಯತ ಮಠಮಾನ್ಯಗಳ ಕುರಿತು ಮಾತನಾಡಿ ಇತ್ತೀಚಿಗೆ ವೀರಶೈವ ಮತ್ತು ಲಿಂಗಾಯತದ ನಡುವೆ ಹಲವು ಗೊಂದಲಗಳು ತಲೆದೋರಿದ್ದು ವಿಷಾಧಕರ ಸಂಗತಿಯಾಗಿದೆ. ಬಸವಾದಿ ಶಿವಶರಣರ ಪೂರ್ವ ಕಾಲದಲ್ಲಿಯೇ ವೀರಶೈವ ಲಿಂಗಾಯತ ಧರ್ಮ ಜನ್ಮತಾಳಿತ್ತು. ಇಷ್ಟ ಲಿಂಗದಲ್ಲಿ ನಿಷ್ಠೆ ಇಟ್ಟವರು ವೀರಶೈವ ಲಿಂಗಾಯತ ಧರ್ಮದವರು. ಅವರೆಡು ಒಂದೇ ಎನ್ನುವುದಕ್ಕೆ 12ನೇ ಶತಮಾನದ ವಚನಕಾರ ಕೊಂಡುಗೋಡಿ ಕೇಶರಾಜನ ವಚನದಲ್ಲಿ ಸಾಕ್ಷ್ಯ ದಾಖಲೆಗಳು ಕಾಣಸಿಗುತ್ತವೆ. ಇಷ್ಟಲಿಂಗದಲ್ಲಿ ನಿಷ್ಠೆ ಇಟ್ಟು ಪೂಜಿಸುವವರು ವೀರಶೈವ ಲಿಂಗಾಯತರು. ಅವೆರೆಡೂ ಒಂದೆ ಎಂದು ಜೆಡರ ದಾಸಿಮಯ್ಯ, ಬಸವಣ್ಣ, ಚನ್ನ ಬಸವಣ್ಣ, ಯಡಿಯೂರು ಸಿದ್ಧಲಿಂಗ ಅವರು ತಮ್ಮ ವಚನಗಳಲ್ಲಿ ವಿವರಣಾತ್ಮಕವಾಗಿ ಬಣ್ಣಿಸಿದ್ದಾರೆ. ಬಹುತೇಕ ವಚನಗಳಲ್ಲಿ ಲಿಂಗಾಯತ, ಲಿಂಗಸ್ವಾಯತ, ಲಿಂಗಸನ್ನಿಹಿತಗಳಿದ್ದು, ಅವುಗಳನ್ನು ಜೀವನದಲ್ಲಿ ಅನುಸಂಧಾನ ಮಾಡಿಕೊಳ್ಳುವುದು ವೀರಶೈವ ಲಿಂಗಾಯತವಾಗಿದ್ದು ಎರಡೂ ಪ್ರತ್ಯೇಕವಾಗಲು ಸಾಧ್ಯವಿಲ್ಲ, ಕರ್ನಾಟಕದಲ್ಲಿ ಸರಕಾರಗಳು ಮಾಡಬಹುದಾದ ದೊಡ್ಡ ಕೆಲಸಗಳನ್ನು ಮಠಗಳು ಮಾಡಿವೆ. ಉನ್ನುವ ಅನ್ನವನ್ನು ಪ್ರಸಾದವಾಗಿಸಿ ಶುದ್ಧ, ಸಿದ್ದ, ಪ್ರಸಿದ್ಧ ಪ್ರಸಾದವಾಗಿಸಿದ ಏಕೈಕ ಧರ್ಮ ಇದಾಗಿದೆ. ವೀರಶೈವ ಲಿಂಗಾಯತರ ಪ್ರಸಾದ ನಿಲಯ, ವಿದ್ಯಾನಿಲಯಗಳು ಇರದೇ ಹೋಗಿದ್ದರೆ ಪ್ರತಿಭಾವಂತರ ಮತ್ತು ಸಮಾಜದ ಸವಾರ್ಂಗೀಣ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ. ಅನ್ಯ ಭಾಷಿಕರ ಆಕ್ರಮಣದ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿದ ಕೀರ್ತಿಯೂ ಕೂಡ ವೀರಶೈವ ಧರ್ಮಕ್ಕೆ ಸಲ್ಲುತ್ತದೆ ಎಂದರು.

ಬಿವಿವಿ ಸಂಘದ ಆಡಳಿತಾಧಿಕಾರಿಗಳು, ಸಾಹಿತಗಳಾದ ಡಾ.ವಿಜಯಕುಮಾರ ಎಸ್.ಕಟಗಿಗಳ್ಳಿಮಠ ವೀರಶೈವ-ಲಿಂಗಾಯತ ಶಿಕ್ಷಣ ಸಂಸ್ಥೆಗಳ ಉಪನ್ಯಾಸದಲ್ಲಿ ಪ್ರಾಚೀನದಿಂದ ಗುರುಕುಲ ಪದ್ದತಿಯಿಂದ ಭಾರತವು ವಿದ್ಯಾಪರಂಪರೆಯನ್ನು ಮುನ್ನಡಿಸುಕೊಂಡು ಬಂದಿದ್ದು ವೀರಶೈವ ಲಿಂಗಾಯತ ಮಠಗಳೊಂದಿಗೆ ಶಿಕ್ಷಣ ಸಂಸ್ಥೆಗಳು ಬೆಳದುಬಂದಿವೆ. ಇಡೀ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಯನ್ನು ಶ್ರೀಮಂತಗೊಳಿಸಿದವರು ವೀರಶೈವ ಲಿಂಗಾಯತ ಸಮುದಾಯದವರು. ಇತಿಹಾಸದುದ್ದಕ್ಕೂ ಸಂಕಷ್ಟಗಳನ್ನು ಎದುರಿಸಿದ ವೀರಶೈವ ಧರ್ಮ ಆಂಗ್ಲೋ ಮೈಸೂರು ಯುದ್ಧಗಳ ನಂತರ ವೀರಶೈವ ಅರಸು ಮನೆತನಗಳು ಹಂಚಿಹೋದವು. ಈ ಸಂದರ್ಭದಲ್ಲಿ ಮಠಮಾನ್ಯಗಳು ಮುನ್ನಲೆಗೆ ಬಂದು ಶಿಕ್ಷಣಸೇವಾ ಕಾರ್ಯದಲ್ಲಿ ತೊಡಗಿ ಕನ್ನಡ ಶಾಲೆಗಳನ್ನು ಆರಂಭಿಸಿದವು ಎನ್ನುವುದು ಇತಿಹಾಸವಾಗಿದೆ, 1893ರವೀರಶೈವ ಲಿಂಗಾಯತರ ಜನಗಣತಿಯಲ್ಲಿ 96 ಪ್ರತಿಶತದಷ್ಟು ಅನಕ್ಷರಸ್ಥ ಇರುವ ವರದಿ ಕಂಡುಬರುತ್ತದೆ. ವೀರಶೈವ ಲಿಂಗಾಯತರನ್ನು ವಿದ್ಯಾವಂತರನ್ನಾಗಿಸಲು ಮನೆ ಮನೆಗೆ ತೆರಳಿ ಒಕ್ಕಲಿಗರ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡಿವೆ. 18ರ ಶತಮಾನದಲ್ಲಿ ಬೆರಳೆಣಿಕೆಗೆ ಸೀಮಿತವಾಗಿದ್ದ ಪದವಿದರರ ಸಂಖ್ಯೆ 19ರ ಶತಮಾನದಲ್ಲಿ ಹೆಚ್ಚುವಂತೆ ಮಾಡಿವೆ. ಟೆಂಗಿನಮಠವು ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸುವುದರ ಮೂಲಕ ಈ ಭಾಗದ ವೀರಶೈವರ ಶಿಕ್ಷಣಕ್ಕೆ ಶ್ರಮಿಸಿದೆ. ದಕ್ಷಿಣ ಭಾರತದಲ್ಲಿಯೇ ಗ್ರಾಮೀಣ ಭಾಗದಲ್ಲಿ ಪದವಿ ಶಿಕ್ಷಣದ ಮಹಾವಿದ್ಯಾಲಯವನ್ನು ಬಾಗಲಕೋಟೆಯಲ್ಲಿ ಪ್ರಾರಂಭಿಸಿದ ಕೀರ್ತಿ ವೀರಶೈವ ಲಿಂಗಾಯತ ಧರ್ಮಕ್ಕೆ ಸಲ್ಲುತ್ತದೆ ಎಂದರು.

ವೇದಿಕೆ ಮೇಲೆ ಕಡಕೋಳದ ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮಿಗಳು, ಕೆರೂರಿನ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು,ಜಮಖಂಡಿಯ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಗುಳೇದಗುಡ್ಡ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಜಮಖಂಡಿಯ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡದ ಅಮರೇಶ್ವರಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಸಂಸದರಾದ ಪಿ.ಸಿ.ಗದ್ದಿಗೌಡರ, ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ,ವಿಧಾನಪರಿಷತ್ ಸದಸ್ಯರಾದ ಹನಮಂತ ನಿರಾಣಿ ,ಅರುಣ ಶಾಹಪೂರ, ಹೂವಪ್ಪ ರಾಠೋಡ, ಮಾಜಿ ಶಾಸಕರಾದ ರಾಜಶೇಖರ ಶಿಲವಂತರ, ಗೌರವ ಕಾರ್ಯದರ್ಶಿಗಳಾದ ಮಹೇಶ ಎನ್.ಅಥಣಿ ಶಿವಲಿಂಗಪ್ಪ ಮೊರಬದ, ಮಹೇಶ ಅಂಗಡಿ, ಶುಭಾಷ ಜಿಗಜಿನ್ನಿ, ಶರಣಪ್ಪ ರುದ್ರಾಕ್ಷಿ, ಎಸ್.ವಿ.ಗೌಡರ, ಸುರೇಶಬಾಬು ನಿಡಗುಂದಿ, ಚನ್ನಯ್ಯಾ ಬಳೂಲಮಠ ಸೇರಿದಂತೆ ಇತರರು ಇದ್ದರು.

ಆಯ್ಯಾಚಾರ ಹಾಗೂ ಲಿಂಗದೀಕ್ಷೆ: ಟೀಕಿನಮಠದ ನೂತನ ಪೂಜ್ಯರ ಪಟ್ಟಾಧೀಕಾರ ಮಹೋತ್ಸವದ ಸಮಾರಂಭ ನಿಮಿತ್ಯ ಶನಿವಾರ ಬೆಳಗಿನ ಜಾವ ಟೀಕಿನಮಠದಲ್ಲಿ ಕೆರೂರ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ 14ಜನ ವಟುಗಳಿಗೆ ಆಯ್ಯಾಚಾರ ಲಿಂಗದೀಕ್ಷೆ ಜರುಗಿತು.


Spread the love

About Laxminews 24x7

Check Also

ವಿದ್ಯೆಯ ಜೊತೆಗೆ ಅನ್ನವನ್ನು ನೀಡಿದ ಕೀರ್ತಿ ಉತ್ತರ ಕರ್ನಾಟಕದ ಮಠಗಳದ್ದು : ಡಾ.ಮಲ್ಲಿಕಾರ್ಜುನ ಮುರಘರಾಜೇಂದ್ರಮಹಾಸ್ವಾಮಿಗಳು

Spread the loveಬಾಗಲಕೋಟೆ: ನಾಡಿನಲ್ಲಿ ವಿದ್ಯೆಯ ಜೊತೆಗೆ ಅನ್ನವನ್ನು ನೀಡಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಉತ್ತರ ಕರ್ನಾಟಕದ ಮಠಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ