ಬೆಂಗಳೂರು: ಸಿಎಂ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದು ಸ್ಮಾರ್ಟ್ ಆಗಿದ್ದೇನೆ. ಗಡ್ಡ ಬಿಟ್ಟಾಗ ಶಿವಾಜಿ ಆಗಿದ್ದೆ, ಈಗ ಬಸವಣ್ಣ ಆಗಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸಿಎಂ ಪದಗ್ರಹಣದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್, ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣವಚನ ತೆಗೆದುಕೊಂಡಿರುವ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನೂ ಎಂದೂ ಮುಖ್ಯಮಂತ್ರಿ, ಸಚಿವ ಸ್ಥಾನಕ್ಕಾಗಿ ಯಾರ ಮನೆಯ ಬಾಗಿಲು ತಟ್ಟಿಲ್ಲ. ಈ ಹಿಂದೆಯೂ ಇದೇ ಹೇಳಿಕೆಯನ್ನು ಹಲವು ಬಾರಿ ನೀಡಿದ್ದು, ನಾನು ಆಡಿದ ಮಾತುಗಳಿಗೆ ಮುಂದೆಯೂ ಬದ್ಧವಾಗಿರುತ್ತೇನೆ.
ಬೊಮ್ಮಾಯಿ ಅವರು ಭ್ರಷ್ಟಾಚಾರ ಮುಕ್ತ ಮತ್ತು ಹಿಂದುತ್ವ ಪರವಾದ ಕೆಲಸಗಳನ್ನು ಮಾಡಿದ್ರೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಬೊಮ್ಮಾಯಿ ಅವರು ಒಬ್ಬರ ರಬ್ಬರ್ ಸ್ಟ್ಯಾಂಪ್ ಅಂತ ಕೆಲವರು ಹೇಳ್ತಾರೆ. ಆದ್ರೆ ಅದು ಸಾಧ್ಯವಿಲ್ಲ. ಬೊಮ್ಮಾಯಿ ಬಹಳ ಬುದ್ಧಿವಂತರಾಗಿದ್ದು, ಗೃಹ ಸಚಿವರಾಗಿದ್ದಾಗ ಹಲವು ಬಾರಿ ಭೇಟಿಯಾಗಿದ್ದೇನೆ. ಸಚಿವರಾಗಿದ್ದಾಗಲೂ ಎಲ್ಲ ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಮುಂದೆ ಯಾರ ನೆರಳಿನ ರೀತಿಯಲ್ಲಿ ಕೆಲಸ ಮಾಡಲ್ಲ ಅನ್ನೋ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಆ ಒಂದು ಕುಟುಂಬದಿಂದ ದೂರ ಉಳಿದು ಆಡಳಿತ ನಡೆಸುವ ವಿಶ್ವಾಸವಿದೆ ಎಂದು ಹೇಳಿದರು.