ಬೆಂಗಳೂರು: ಉತ್ತರಪ್ರದೇಶದಂತೆ ಇಲ್ಲೂ ಮಠಾಧೀಶರನ್ನ ಸಿಎಂ ಮಾಡಿ ಎಂದು ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಶ್ರೀ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮಠಾಧೀಶರ ಸಮಾವೇಶದಲ್ಲಿ ಹೇಳಿಕೆ ನೀಡಿರುವ ಶ್ರೀಗಳು, ಧರ್ಮವನ್ನ ಕಾಪಾಡಲು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರನ್ನ ಸಿಎಂ ಮಾಡಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಯೋಗಿಗಳನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
“ರಾಜ್ಯದಲ್ಲಿ ಹಲವಾರು ಜಾತಿ ವ್ಯವಸ್ಥೆ ಇದೆ. ಆ ಜಾತಿಯಲ್ಲಿ ಮಠಾಧೀಶರು ಕೂಡ ಇದ್ದಾರೆ. ಯಾವುದೇ ಧರ್ಮವೇ ಇರಲಿ, ಅವರು ಧರ್ಮವನ್ನ ಉಳಿಸಿಕೊಂಡು ಹೋಗುತ್ತಾರೆ. ಧರ್ಮವನ್ನ ಕಾಪಾಡಲು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರನ್ನ ಸಿಎಂ ಮಾಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಯೋಗ್ಯ ಗುರುಗಳನ್ನು ಆಯ್ಕೆ ಮಾಡಲಿ” ಎಂದು ಅವರು ಸಲಹೆ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ವಿವಿಧ ಸಮುದಾಯದ ಮಠಾಧೀಶರ ಸಮಾವೇಶ ನಡೆಯುತ್ತಿದ್ದು, ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ ಶೀರ್ಷಿಕೆ ಅಡಿಯಲ್ಲಿ ಮಹಾ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ. ತುಮಕೂರು ಜಿಲ್ಲೆ ತಿಪಟೂರಿನ ಷಡಕ್ಷರಿ ರುದ್ರಮುನಿ ಸ್ವಾಮೀಜಿ, ಗದಗ ಜಿಲ್ಲೆ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕತೊಟ್ಟಿಲಕೆರೆ ಅಟವಿ ಶಿವಲಿಂಗ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
ಸಮಾವೇಶಕ್ಕೆ ಸುಮಾರು ಒಂದು ಸಾವಿರ ಮಠಾಧೀಶರು ಸೇರುತ್ತಾರೆಂದು ದಿಂಘಾಲೇಶ್ವರ ಸ್ವಾಮೀಜಿಗಳು ಹೇಳಿಕೆ ನೀಡಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸ್ವಾಮೀಜಿಗಳು ಬರದೇ, ಸುಮಾರು ೨೦೦ ಸ್ವಾಮೀಜಿಗಳು ಮಾತ್ರ ಆಗಮಿಸಿದ್ದಾರೆ.