ವಿಜಯನಗರ: ಹೂವಿನ ಹಡಗಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಸಹೋದರ ಮತ್ತು ಬಿಜೆಪಿ ಮುಖಂಡ ಪಿ.ಟಿ ಶಿವಾಜಿ ನಾಯ್ಕ್ ನಡುವೆ ಮತ್ತೆಗೂಂಡಾಗಿರಿ ಮುಂದುವರಿದಿದೆ ಎನ್ನಲಾಗಿದೆ. ನನ್ನ ಮೇಲೆಯೇ ಕೇಸ್ ಮಾಡ್ತೀಯಾ? ಎಂದು ಶಿವಾಜಿ ನಾಯ್ಕ್ ತನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರಂತೆ. ಇಂದು ಬೆಳಿಗ್ಗೆಯೇ ಜೈಲಿನಿಂದ ಬೇಲ್ ಮೇಲೆ ಹೊರ ಬಂದ ಶಿವಾಜಿ ನಾಯ್ಕ್, ದೂರುದಾರರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡಾದಲ್ಲಿ ಶರಣಾ ನಾಯ್ಕ್ ಮತ್ತವರ ಕುಟುಂಬಸ್ಥರ ಮೇಲೆ ಹಲ್ಲೆಯಾಗಿದೆ. ಮನೆಗೆ ನುಗ್ಗಿದ್ದ ಶಿವಾಜಿ ನಾಯ್ಕ್ ಮೊದಲು ಶರಣಾ ನಾಯ್ಕ್ ಮತ್ತವರ ಮಗ ಜಗದೀಶ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ. ಶರಣಾ ನಾಯ್ಕ್ ಹೆಂಡತಿಗೆ ಚಾಕುವಿನಿಂದ ಇರಿಯಾಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮತ್ತೆ ದೂರು ನೀಡಲು ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಠಾಣೆಯಲ್ಲೇ ಇಡೀ ಕುಟುಂಬ ವಿಷ ಕುಡಿದು ಆತ್ಮಹತ್ಯೆಗೆ ಮುಂದಾದಾಗ ಪೊಲೀಸರು ತಡೆದಿದ್ದಾರೆ.
ಪೊಲೀಸರಿಂದಲೇ ನಮಗೆ ಯಾವುದೇ ರಕ್ಷಣೆಯಿಲ್ಲ. ನಾವು ಬದುಕಲು ಹೇಗೆ ಸಾಧ್ಯ, ಸಾಯುತ್ತೇವೆ ಎಂದು ಶರಣಾ ನಾಯ್ಕ್ ಕುಟುಂಬ ವಿಷ ಕುಡಿಯಲು ಮುಂದಾಗಿದೆ ಎಂದು ಹೇಳಲಾಗಿದೆ. ಆಗ ಇವರ ಬಳಿಯಿದ್ದ ವಿಷದ ಬಾಟಲ್ ಕಿತ್ತುಕೊಂಡು ಪೊಲೀಸರು ಸಮಾಧಾನ ಮಾಡಿದ್ದಾರೆ. ಇನ್ನು, ಶಿವಾಜಿ ನಾಯ್ಕ್ ಗೂಂಡಾಗಿರಿ ಹಿಂದೆ ಹರಪನಹಳ್ಳಿ ಶಾಸಕ ಕರುಣಾಕರ್ ರೆಡ್ಡಿ ಕುಮ್ಮಕ್ಕಿದೆ. ನಮಗೆ ನ್ಯಾಯ ಸಿಗೋವರೆಗೂ ಎಲ್ಲಿಗೂ ಹೋಗಲ್ಲ ಎಂದು ಶರಣಾ ನಾಯ್ಕ್ ಕುಟುಂಬ ಪೊಲೀಸ್ ಠಾಣೆಯ ಮುಂದೆಯೇ ಕುಳಿತಿದ್ದಾರೆ.
ಇತ್ತೀಚೆಗೆ ಮನೆ ಜಾಗದ ಸಲುವಾಗಿ ಕಬ್ಬಿಣದ ಹಾರೆಯಿಂದ ಪಿ ಟಿ ಶಿವಾಜಿ.. ಶರಣ ನಾಯ್ಕನ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಘಟನೆ ವೀಡಿಯೋದಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿತ್ತು. ಈ ಸಂಬಂಧ ಶಿವಾಜಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.