ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅಬ್ಬರ ಹೆಚ್ಚಾಗುತ್ತಿದ್ದು ಸೋಂಕು ನಿಯಂತ್ರಣಕ್ಕಾಗಿ ಎರಡು ಡೋಸ್ ಲಸಿಕೆ ಪಡೆದಿದ್ದ ಖ್ಯಾತ ಸರ್ಜನ್ ಡಾ. ಅನಿಲ್ ಕುಮಾರ್ ರಾವತ್ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಸರ್ಜನ್ ಅನಿಲ್ ಕುಮಾರ್ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ದೆಹಲಿ ಸರೋಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಡಾ. ಅನಿಲ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.
ಸಾವನ್ನು ಗೆದ್ದು ಬರುತ್ತೇನೆ ಎಂದು ಹೇಳಿದ್ದ ವೈದ್ಯ
ಸಾವಿಗೂ ಮುನ್ನ ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿದ್ದ ಸರ್ಜನ್ ಅನಿಲ್ ಕುಮಾರ್ ಅವರು, ನಾನು ಎರಡೂ ಡೋಸ್ ಲಸಿಕೆ ಪಡೆದಿದ್ದು, ಶೀಘ್ರ ಗುಣಮುಖನಾಗಿ ಬರುತ್ತೇನೆ ಎಂದು ಹೇಳಿದ್ದರು. ಆದರೆ ಜವರಾಯನ ವಿರುದ್ಧದ ಹೋರಾಟದಲ್ಲಿ ಅನಿಲ್ ಕುಮಾರ್ ಸೋತಿದ್ದಾರೆ.
ಎರಡೂ ಡೋಸ್ ಲಸಿಕೆ ಪಡೆದಿದ್ದ ಸರ್ಜನ್
ಸರ್ಜನ್ ಅನಿಲ್ ಕುಮಾರ್ ಅವರು ತಮ್ಮ ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಇವರು ಕಳೆದ ಮಾರ್ಚ್ನಲ್ಲಿ ಎರಡನೆಯ ಲಸಿಕೆ ಪಡೆದಿದ್ದರು. ದೇಶದಲ್ಲಿ ಕೊರೊನಾ ಲಸಿಕೆಯನ್ನು ಮೊದಲ ಹಂತದಲ್ಲಿ ನೀಡಿದ್ದು, ಕೊರೊನಾ ವಾರಿಯರ್ಸ್ ಎನಿಸಿಕೊಂಡ ಆರೋಗ್ಯ ಸಿಬ್ಬಂದಿಗೆ ನೀಡಲಾಗಿದ್ದರೂ ಮಹಾಮಾರಿ ಇವರನ್ನು ಬಲಿ ಪಡೆದುಕೊಂಡಿದೆ ಎಂದು ಸರೋಜ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಪಿ.ಕೆ. ಭಾರದ್ವಾಜ್ ತಿಳಿಸಿದ್ದಾರೆ.
ಕೊರೊನಾ ಲಸಿಕೆಯ ಎರಡು ಡೋಸ್ ಹಾಕಿಸಿಕೊಂಡರೆ ಸೋಂಕು ತಗಲುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಎಲ್ಲೆಡೆ ಲಸಿಕೆ ಅಭಿಯಾನ ಶುರುವಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
Laxmi News 24×7