ಚಿಕ್ಕಮಗಳೂರು : ಶೃಂಗೇರಿ 15ರ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರ ಬಿದ್ದಿದ್ದು, ರೇಪ್ ರೂವಾರಿ ಚಿಕ್ಕಮ್ಮ ಅಲ್ಲ ಬದಲಿಗೆ ಆಕೆಯ ಹೆತ್ತ ತಾಯಿಯೇ ಎಂಬುದು ಬೆಳಕಿಗೆ ಬಂದಿದೆ. ಜನವರಿ 30 ರಂದು ದಾಖಲಾದ ಪ್ರಕರಣದ ಬೆನ್ನು ಹತ್ತಿದ್ದ ಎಎಸ್ಪಿ ಶೃತಿ ನೇತೃತ್ವದ ತಂಡ, ಈ ವರೆಗೆ ಪ್ರಕರಣ ಸಂಬಂಧ ತಾಯಿ ಗೀತಾ(43) ಸೇರಿ 32 ಜನರನ್ನು ಬಂಧಿಸಿದೆ.
ತಾಯಿ ಸತ್ತ ಬಾಲಕಿಯನ್ನು ಓದಿಸುತ್ತೇನೆಂದು ಕರೆತಂದಿದ್ದ ಚಿಕ್ಕಮ್ಮನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಕಳೆದ ಒಂದೂವರೆ ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಹಣದಾಸೆಗೆ ಯುವತಿಯನ್ನು ವೇಶ್ಯೆ ವೃತ್ತಿಗೆ ತಳ್ಳಿದ್ದು ಆಕೆಯ ಚಿಕ್ಕಮ್ಮಳಲ್ಲ, ಹೆತ್ತ ತಾಯಿಯೇ ಎಂದು ತಿಳಿದು ಬಂದಿದೆ. ತನಿಖೆಯ ಮೊದಲು ಬಾಲಕಿಯ ಚಿಕ್ಕಮ್ಮ ಎಂದು ಮಹಿಳೆ ಹೇಳಿಕೊಂಡಿದ್ದಳು.
ಆದರೆ ತನಿಖೆ ವೇಳೆ ಬಾಲಕಿಯ ಚಿಕ್ಕಮ್ಮ ಅಲ್ಲ ಹೆತ್ತಮ್ಮ ಎಂಬುದು ಸಾಬೀತಾಗಿದೆ. ಉತ್ತರ ಕರ್ನಾಟಕದ ಮಹಿಳೆ ಶೃಂಗೇರಿಗೆ ಬಂದು ಮತ್ತೊಬ್ಬನ ಜೊತೆ ವಿವಾಹವಾಗಿದ್ದಳು. ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡು ಬಾಲಕಿಯನ್ನು ಸಾಕುತ್ತಿದ್ದಳು. ಕೆಲ ವರ್ಷಗಳ ನಂತರ ಎರಡನೇ ಗಂಡನಿಂದಲೂ ದೂರವಾಗಿದ್ದ ಮಹಿಳೆ, ಶೃಂಗೇರಿಯಲ್ಲೇ ಬಾಲಕಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು.
ಈ ವೇಳೆ ಹಣದಾಸೆಗೆ ಪಾಪಿ ತಾಯಿ ತನ್ನ ಮಗಳನ್ನು ವೇಶ್ಯಾವೃತ್ತಿಗೆ ತಳ್ಳಿದ್ದಾಳೆ. ಮಗಳ ನಿರಂತರ ಅತ್ಯಾಚಾರಕ್ಕೆ ತಾಯಿಯೇ ಅವಕಾಶ ಮಾಡಿಕೊಟ್ಟಿದ್ದಳು. ಪ್ರಕರಣದ ಸಂಬಂಧ ಈವರೆಗೆ 32 ಆರೋಪಿಗಳನ್ನು ಬಂಧಿಸಲಾಗಿದೆ. ಹಣಕ್ಕಾಗಿ ಹೆತ್ತ ಮಗಳನ್ನೇ ತಾಯಿ ವೇಶ್ಯಾವಾಟಿಕೆಗೆ ತಳ್ಳಿದ ವಿಷಯ ಕೇಳಿ ಕಾಫಿನಾಡು ಕಂಗಾಲಾಗಿದ್ದು, ಕಠಿಣ ಶಿಕ್ಷೆ ನೀಡಬೇಕೆಂದು ಕಾಫಿನಾಡ ಜನತೆ ಆಗ್ರಹಿಸಿದ್ದಾರೆ.
Laxmi News 24×7