ಹುಬ್ಬಳ್ಳಿ: ಗ್ರಾಮ ವಾಸ್ತವ್ಯಕ್ಕಾಗಿ ತಾಲೂಕಿನ ಛಬ್ಬಿ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು.
ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದ ಸಚಿವರು ಸಿದ್ದಾರೂಢಸ್ವಾಮಿ ಮಠಕ್ಕೆ ಆಗಮಿಸಿ ದರ್ಶನ ಪಡೆದರು. ನಂತರ ಗ್ರಾಮದ ಸೊಸೈಟಿಗೆ ಆಗಮಿಸಿದ ಸಚಿವರಿಗೆ ನೂರಾರು ಮಹಿಳೆಯರು ಪೂರ್ಣಕುಂಭ, ಆರತಿಗಳೊಂದಿಗೆ ಸ್ವಾಗತ ಕೋರಿದರು.
ಅಲಂಕೃತ ಎತ್ತಿನ ಬಂಡಿಯಲ್ಲಿ ಮೆರವಣಿಗೆಯಲ್ಲಿ ಪ್ರಾಥಮಿಕ ಶಾಲೆವರೆಗೂ ಸಾಗಿದರು. ಜಗ್ಗಲಿಗೆ, ಹಲಿಗೆ, ಬ್ಯಾಂಡ್, ಮರಕುದುರೆ ವಿವಿಧ ವಾದ್ಯಗಳು ಸಾಥ್ ನೀಡಿದವು.
ಗ್ರಾಮದ ವಿದ್ಯಾರ್ಥಿನಿಯರು ಗ್ರಾಮದಲ್ಲಿ ಪ್ರೌಢ ಶಾಲೆ ಇಲ್ಲವಾಗಿದ್ದು, ನಾಲ್ಕೈದು ಕಿ.ಮೀ.ದೂರದ ಅರಳಿಕಟ್ಟೆಗೆ ಹೋಗಬೇಕು. ಬಸ್ ಸೌಲಭ್ಯ ಇಲ್ಲವಾಗಿದೆ ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ಶರೇವಾಡದ ಬಳಿ 6.5 ಎಕರೆ ಜಾಗದಲ್ಲಿ ಡಾ. ಅಂಬೇಡ್ಕರ ವಸತಿ ಶಾಲೆ ಆರಂಭಕ್ಕೆ ಸಂಜೆಯೇ ಜಾಗದ ಮಂಜೂರಾತಿ ಆದೇಶ ನೀಡುವುದಾಗಿ ಹೇಳಿದರು.
ದಲಿತರ ಕಾಲೊನಿಗೆ ಹೋಗಿ ಅಹವಾಲು ಆಲಿಸಿದರು. ಮನೆ ಬಾಗಿಲಿಗೆ ತೆರಳಿ ಮಾಸಾಶನ ಮಂಜೂರಾತಿ ಪತ್ರ ನೀಡಿದರು. ನಂತರ ಅಂಗವಿಕಲರಿಗೆ ಕೃತಕಕಾಲು ಸೇರಿದಂತೆ ವಿವಿಧ ಸಲಕರಣೆ ವಿತರಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಅನೇಕರಿದ್ದರು.
Laxmi News 24×7