ಬೆಂಗಳೂರು: ವಿಧಾನಸೌಧದಲ್ಲಿ ಇಂದು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಹಾಜರಾಗದೆ ಬಹಿಷ್ಕರಿಸಿತು. ಸೋಮವಾರ ಬಜೆಟ್ ಮಂಡನೆ ವೇಳೆ ಸದನದಿಂದ ಸಭಾತ್ಯಾಗ ಮಾಡಿದ್ದ ಕಾಂಗ್ರೆಸ್ ಇಂದು ಕೂಡಾ ಬಿಎಸಿ ಸಭೆಗೂ ಹಾಜರಾಗದೆ ಅಸಮಾಧಾನ ತೋರಿತು.
ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಹೀಗಾಗಿ ಇಂದು ಸಭೆ ಹಾಜರಾಗಬೇಕಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಗೈರಾದರು.
ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಇಂದಿನ ಬಿಎಸಿ ಸಭೆ ಮಹತ್ವ ಪಡೆದಿತ್ತು. ಆದರೆ ಸಿಎಂ ಯಡಿಯೂರಪ್ಪ ಸಭೆಗೆ ಬಂದರೂ ಸಿದ್ದರಾಮಯ್ಯ ಬಂದಿರಲಿಲ್ಲ. ಸಿಎಂ ಬಿಎಸ್ ವೈ ಸಭೆಗೆ ಬಂದು ಹತ್ತು ನಿಮಿಷ ಕಾದು ಕುಳಿತರು.
ಈ ಬಗ್ಗೆ ಮಾತನಾಡಿದ ಸಚಿವ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ. ರಾಜಕೀಯ ಕಾರಣಕ್ಕೋಸ್ಕರ ಸಭೆ ಬಹಿಷ್ಕಾರ ಮಾಡುವುದು ಸರಿಯಲ್ಲ. ಏನೇ ಇದ್ದರೂ ವಿಧಾನಸಭೆಯೊಳಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳೋಣ ಎಂದರು.
ಬಜೆಟ್ ಬಗ್ಗೆ ಚರ್ಚೆ ಮಾಡದೇ ಬಹಿಷ್ಕಾರ ಮಾಡಿದರೆ ಏನು ಪ್ರಯೋಜನ? ಸಭೆಯಲ್ಲಿ ಬಂದು ಜನರ ವಿಚಾರಗಳನ್ನು ಚರ್ಚೆ ಮಾಡೋಣ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇತಿಹಾಸದಲ್ಲಿ ಯಾವತ್ತೂ ಕೂಡ ಈ ರೀತಿಯಾಗಿಲ್ಲ. ಮಾಧ್ಯಮಗಳ ಮೂಲಕವೇ ಸಭೆಗೆ ಹಾಜರಾಗುವಂತೆ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
 Laxmi News 24×7
Laxmi News 24×7
				 
		 
						
					