ಬೆಳಗಾವಿ: ಜಿಎಸ್ಟಿ ಪಾವತಿ ವಿಷಯದಲ್ಲಿ ₹ 14.74 ಕೋಟಿ ತೆರಿಗೆ ವಂಚಿಸಿದ ಆರೋಪದ ಮೇಲೆ ಸುವರ್ಣ ಬಿಲ್ಡ್ಕಾನ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಮನೋಜಕುಮಾರ್ ಪ್ರನ್ನಾಥ್ ಅಬ್ರೋಲ್ ಎನ್ನುವವರನ್ನು ಜಿಎಸ್ಟಿ ನಿರ್ದೇಶನಾಲಯದ ಜಾಗೃತ ದಳವು ಬೆಳಗಾವಿಯಲ್ಲಿ ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
‘ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಆರೋಪಿಯನ್ನು ಜ. 25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಂಗಳೂರಿನ ಆ ಕಂಪನಿಯು ಪುಣೆಯಲ್ಲಿ ಕಾರ್ಪೊರೇಟ್ ಕಚೇರಿ ಹೊಂದಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಜಿಎಸ್ಟಿ ನೋಂದಾಯಿಸಿದೆ. ರಸ್ತೆ ನಿರ್ಮಾಣ, ನೀರಾವರಿ ಮೊದಲಾದ ಯೋಜನೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಬೆಳಗಾವಿಯ ಜಿಎಸ್ಟಿ ಜಾಗೃತ ದಳದ ಅಧಿಕಾರಿಗಳು ಅದರ ಕಾರ್ಯನಿರ್ವಹಣೆ, ತೆರಿಗೆ ವಹಿವಾಟು, ಪಾವತಿ ಬಗ್ಗೆ ವಿಚಾರಣೆ ನಡೆಸಿದಾಗ ತರಿಗೆ ವಂಚನೆಯ ವಿಷಯ ತಿಳಿದುಬಂದಿದೆ’ ಎಂದು ಜಿಎಸ್ಟಿ ಜಾಗೃತ ದಳದ ಪ್ರಧಾನ ಹೆಚ್ಚುವರಿ ನಿರ್ದೇಶಕ ಜೇನ್ ಕರುಣ ನಾಥನೆಲ್ ತಿಳಿಸಿದ್ದಾರೆ.
’11 ಬೋಗಸ್ ಸರಬರಾಜುದಾರರು ಕಂಪನಿಗೆ ನಕಲಿ ಇನ್ವಾಯ್ಸ್ಗಳನ್ನು ನೀಡಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಎರಡು ತಿಂಗಳಿಂದ ವಿಶೇಷ ಕಾರ್ಯಾಚರಣೆ ನಡೆಸಿ, ಇತರ 22 ಪ್ರಕರಣಗಳಲ್ಲಿ ₹ 77 ಕೋಟಿ ತೆರಿಗೆ ವಂಚಿಸಿರುವುದನ್ನು ಪತ್ತೆ ಹಚ್ಚಲಾಗಿದೆ. ₹ 12.5 ಕೋಟಿ ಸಂಗ್ರಹಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Laxmi News 24×7