ಜೇನುಗಳಿಂದ ಇಪ್ಪತ್ತು ಮಕ್ಕಳ ಪ್ರಾಣ ಉಳಿಸಿ ತಾನು ಜೀವಕೊಟ್ಟ ಮಹಾತಾಯಿ.
ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಅಂಗನವಾಡಿ ಅಡುಗೆ ಸಹಾಯಕಿ ಕಾಂಚನ್ ಬಾಯಿ ಮೇಘವಾಲ್ ಅವರ ತಮ್ಮ ಜೀವ ಬಲಿಕೊಟ್ಟು ಇಪ್ಪತ್ತು ಮಕ್ಕಳನ್ನು ರಕ್ಷಿಸಿದ್ದಾರೆ.
ಇಪ್ಪತ್ತು ಪುಟ್ಟ ಕಂದಮ್ಮಗಳಿದ್ದ ಅಂಗನವಾಡಿ ಕೇಂದ್ರಕ್ಕೆ ಮರದಲ್ಲಿದ್ದ ಜೇನುಗೂಡು ಹಠಾತ್ತನೆ ಕದಡಿ ಸಾವಿರಾರು ಜೇನುನೊಣಗಳು ಆ ಕಂದಮ್ಮಗಳ ಮೇಲೆರಗಿದಾಗ ದಿಕ್ಕಾಪಾಲಾಗಿ ಓಡುತ್ತಿದ್ದ ಮಕ್ಕಳ ಆರ್ತನಾದ ಕೇಳಿದ ಕಾಂಚನ್ ಬಾಯಿ ಕ್ಷಣಾರ್ಧವೂ ಯೋಚಿಸದೇ ತನ್ನ ಪ್ರಾಣದ ಹಂಗು ತೊರೆದು ಆ ಪುಟ್ಟ ಮಕ್ಕಳನ್ನು ರಕ್ಷಿಸಲು ಮುಂದಾದರು.
ಹತ್ತಿರವಿದ್ದ ಟಾರ್ಪಾಲಿನ್ ಮತ್ತು ಚಾಪೆಗಳಿಂದ ಮಕ್ಕಳನ್ನು ಸಂಪೂರ್ಣವಾಗಿ ಮುಚ್ಚಿ ಪ್ರತಿಯೊಂದು ಮಗುವೂ ಸುರಕ್ಷಿತವಾಗಿರಲಿ ಎಂದು ತಾವೇ ಆ ಕವಚಕ್ಕೆ ಅಂಟಿಕೊಂಡರು.
ನೂರಾರು ಜೇನುನೊಣಗಳು ಅವರ ದೇಹದ ಮೇಲೆ ದಾಳಿ ಮಾಡಿ ಕಚ್ಚುತ್ತಿದ್ದರೂ ಮಕ್ಕಳು ಸುರಕ್ಷಿತರಾಗುವವರೆಗೂ ಅವರು ಅಲ್ಲಿಂದ ಕದಲಲಿಲ್ಲ. ಇಡೀ ಮೈ ವಿಷದಿಂದ ಕೆಂಪಾಗಿದ್ದರೂ, ಮಕ್ಕಳನ್ನು ಬಿಟ್ಟು ಕೊಡದೇ ಎಲ್ಲಾ ಮಕ್ಕಳನ್ನು ರಕ್ಷಿಸಿದ ನಂತರ ಕಾಂಚನ್ ಬಾಯಿ ಅವರು ಅತೀವವಾದ ವಿಷದ ಪರಿಣಾಮದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇಪ್ಪತ್ತು ಜೀವಗಳನ್ನು ಉಳಿಸಿದ ಆ “ಅಮ್ಮ” ಇಂದು ನಮ್ಮೊಂದಿಗಿಲ್ಲ, ಆದರೆ ಆ ಮಕ್ಕಳ ಉಸಿರಿನಲ್ಲಿ ಅವರು ಅಮರರಾಗಿದ್ದಾರೆ.
ಜನ್ಮ ನೀಡದಿದ್ದರೂ ಆ 20 ಮಕ್ಕಳ ಪಾಲಿಗೆ ಇವರು ಮರುಜನ್ಮ ನೀಡಿದ ತಾಯಿಯಾದರು.
ಬಡತನದಲ್ಲೂ ಶ್ರೀಮಂತ ವ್ಯಕ್ತಿತ್ವ ಮೆರೆದ, ಕರ್ತವ್ಯಕ್ಕಿಂತ ಮಿಗಿಲಾಗಿ ಮಾನವೀಯತೆ ತೋರಿದ ಅಮರಜೀವಿ ಕಾಂಚನ್ ಬಾಯಿ ಅವರಿಗೆ ಕೋಟಿ ಕೋಟಿ ನಮನಗಳು.
Laxmi News 24×7