ಕಳೆದ 11 ವರ್ಷಗಳಿಂದ ಒಕ್ಕುಂದ ಉತ್ಸವ ಆಚರಿಸುತ್ತಿರುವ ಗ್ರಾಮಸ್ಥರನ್ನು ಶ್ಲಾಘಿಸಿದ ಡಿಸಿ ಮೊಹಮ್ಮದ್ ರೋಷನ್ ಅವರು ಬರುವ ವರ್ಷ ಇದು ಸರ್ಕಾರಿ ಉತ್ಸವ ಆಗಲಿದೆ ಎಂದಿದ್ದಾರೆ.
ಬೆಳಗಾವಿ: “ಒಕ್ಕುಂದ ಗ್ರಾಮದ ಐತಿಹಾಸಿಕ ತ್ರಿಕೂಟೇಶ್ವರ ಮಂದಿರ ಜೀರ್ಣೋದ್ಧಾರಪಡಿಸಿ, ಪ್ರಸಿದ್ಧ ಪ್ರವಾಸಿ ತಾಣ ಮಾಡಲಾಗುವುದು. ಮುಂಬರುವ ವರ್ಷ ಒಕ್ಕುಂದ ಉತ್ಸವ ಸರ್ಕಾರದಿಂದಲೇ ಆಚರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭರವಸೆ ನೀಡಿದರು.
ಭಾನುವಾರ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಸವದತ್ತಿ ರಟ್ಟರ ಕಾಲದಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇಲ್ಲಿದೆ. ಅದ್ಭುತ ಕೆತ್ತನೆ ಮನಸ್ಸಿಗೆ ಮುದ ನೀಡುತ್ತದೆ. ಕನ್ನಡದ ಮೊದಲ ಆದ್ಯ ಗ್ರಂಥ ಕವಿರಾಜ ಮಾರ್ಗದಲ್ಲಿ ತಿರುಳ್ಗನ್ನಡನಾಡು ಅಂತಾ ಕರೆಸಿಕೊಂಡಿದ್ದು, ವಿವಿಧ ಸಾಮ್ರಾಜ್ಯಗಳು ಆಳಿರುವ ಗತವೈಭವ ಇರುವ ವಿಶಿಷ್ಟ ಗ್ರಾಮ ಒಕ್ಕುಂದ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಶೀಘ್ರವೇ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಯೋಜನೆ ರೂಪಿಸಲಾಗುವುದು” ಎಂದರು.
“ವಿವಿಧತೆಯಲ್ಲಿ ಏಕತೆ ಹೊಂದಿರುವ ಒಕ್ಕುಂದ ಇತರೆ ಗ್ರಾಮಗಳಿಗೆ ಮಾದರಿ ಆಗಿದೆ. ಇಲ್ಲಿನ ಜನರ ಪ್ರೀತಿ, ಆತಿಥ್ಯ ಕಂಡು ನನಗೆ ತುಂಬಾ ಸಂತೋಷವಾಗಿದೆ. ಗ್ರಾಮದ ಮಕ್ಕಳ ಉತ್ಸಾಹ ಅಪರಿಮಿತವಾಗಿದೆ. ಗ್ರಾಮಸ್ಥರೇ ಸೇರಿಕೊಂಡು ಊರಿನ ಇತಿಹಾಸ ನಾಡಿಗೆ ಪರಿಚಯಿಸಲು ಕಳೆದ 11 ವರ್ಷಗಳಿಂದ ಉತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಬರುವ ವರ್ಷ ಇದು ಸರ್ಕಾರಿ ಉತ್ಸವ ಆಗಲಿದೆ ಎಂದು ಜಿಲ್ಲಾಧಿಕಾರಿ ಹರ್ಷ ವ್ಯಕ್ತಪಡಿಸಿದರು.
ಮಕ್ಕಳ ಜೊತೆಗೆ ಮಕ್ಕಳಾದ ಡಿಸಿ: ಒಕ್ಕುಂದ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಭೇಟಿ ಆಗಲು ಮುಗಿ ಬಿದ್ದರು. ಈ ವೇಳೆ ಮಕ್ಕಳಿಗೆ ಚನ್ನಾಗಿ ಅಭ್ಯಾಸ ಮಾಡಿ, ನನ್ನಂತೆ ಜಿಲ್ಲಾಧಿಕಾರಿ ಆಗುವಂತೆ ಸ್ಫೂರ್ತಿಯ ಮಾತುಗಳನ್ನಾಡಿದರು. ಅದೇ ರೀತಿ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಚೇತನಾ ಉಳ್ಳಿಗೇರಿ ಅರಳು ಹುರಿದಂತೆ ಇಂಗ್ಲೀಷ್ನಲ್ಲಿ ಮಾತನಾಡಿದ್ದು ಕಂಡು ಡಿಸಿ ಬೆರಗಾದರು. ನಮ್ಮ ಸರ್ಕಾರಿ ಶಾಲಾ ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಎಂದು ಡಿಸಿ ಸಂತಸ ವ್ಯಕ್ತಪಡಿಸಿದರು. ಅವರ ಜೊತೆಗೆ ಮಕ್ಕಳು ಫೋಟೊ ತೆಗೆಸಿಕೊಂಡರು ಸಂಭ್ರಮಿಸಿದರು
Laxmi News 24×7