ಚಿತ್ರದುರ್ಗ ಕಾಂಗ್ರೆಸ್ ಶಾಸಕ ಪಪ್ಪಿ ಇ.ಡಿ ಮುಕ್ತ..
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಳಿಕ ಜೈಲು ಸೇರಿದ್ದ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಹೊಸ ವರ್ಷ 2026 ಮುನ್ನ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಮಂಗಳವಾರ (ಡಿಸೆಂಬರ್ 30) ಆದೇಶ ಹೊರಡಿಸಿದೆ.
ಅಕ್ರಮವಾಗಿ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ನಗದು, ವಿದೇಶಿ ಹಣ, ಚಿನ್ನಾಭರಣವ ವಶಕ್ಕೆ ಪಡೆಯಲಾಗಿತ್ತು. ನಂತರ ವಿರೇಂದ್ರ ಪಪ್ಪಿಯ ಬಂಧನವಾಗಿತ್ತು. ಅಲ್ಲಿಂದ ಈವರೆಗೆ ಜೈಲಿನಲ್ಲಿದ್ದ ಪಪ್ಪಿಗೆ ಜನಪ್ರತಿನಿಧಿಗಳ ಕೋರ್ಟ್ ಜಾಮೀನು ಮಂಜು ಮಾಡಿದೆ. ಇದರಿಂದ ಅವರ ನಾಲ್ಕು ತಿಂಗಳ ಜೈಲು ವಾಸ ಅಂತ್ಯಗೊಂಡಿದೆ.
ಅಪಾರ ಹಣ ವರ್ಗಾವಣೆ ಪತ್ತೆ: ದಾಳಿಯಲ್ಲಿ 55 ಕೋಟಿ ರೂ. ಜಪ್ತಿ
ಶಾಸಕ ವಿರೇಂದ್ರ ಪಪ್ಪಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ 55 ಕೋಟಿ ರೂಪಾಯಿ ನಗದು ವಶಕ್ಕೆ ಪಡೆದಿತ್ತು. ನಗದು ಸೇರಿ ಅಪಾರ ಸಂಪತ್ತು ಪತ್ತೆ ಆಗಿತ್ತು. ಪ್ರಕರಣ ಸಂಬಂಧಿ ಪೊಲೀಸರು ಪಪ್ಪಿಯನ್ನು ಬಂಧಿಸಿದ್ದರು.
ಇಡಿ ಅಧಿಕಾರಿಗಳು ಒಂಬತ್ತು ಬ್ಯಾಂಕ್ಗಳ ಖಾತೆಗಳು, 260ಕ್ಕು ಅಧಿಕ ಮ್ಯೂಲ್ ಖಾತೆಗಳಲ್ಲಿನ (ಒಟ್ಟು 55 ಕೋಟಿ ರೂ) ನಗದನ್ನು ಜಪ್ತಿ ಮಾಡಿದರು. ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದರು. ಐದು ಐಶಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದರು.
ಬೆಲ್ಲಾಜಿಯೋ ಕ್ಯಾಸಿನೊ, ಮರೀನಾ ಕ್ಯಾಸಿನೊ, ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಕ್ಯಾಸಿನೋ ಜುವೆಲ್ ಹೀಗೆ ಹಲವು ಅಂತಾರಾಷ್ಟ್ರೀಯ ಕ್ಯಾಸಿನೊ ಸದಸ್ಯತ್ವ ಹೊಂದಿದ್ದರೆಂದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೇ ವಿವಿಧ ಬ್ಯಾಂಕ್ಗಳಲ್ಲಿ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿತ್ತು.
ಐಶಾರಾಮಿ ಆತಿಥ್ಯ ವಹಿಸುತ್ತಿದ್ದರು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ಗಳ ಬಳಕೆ, ಆರ್ಥಿಕ ವ್ಯವಹಾರಗಳು, ಅಕ್ರಮ ಹಣ ವರ್ಗಾವಣೆಯ ಎಲ್ಲ ಮಾಹಿತಿ ಸಂಗ್ರಹಿಸಿ ಇಡಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದರು. ಅಲ್ಲಿಂದ ವೀರೇಂದ್ರ ಪಪ್ಪಿಗೆ ಜೈಲು ಗತಿಯಾಗಿತ್ತು. ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪಪ್ಪಿ ಅರ್ಜಿ ನಿರಂತರ ವಿಚಾರಣೆ ನಡೆದು ನಿನ್ನೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ
Laxmi News 24×7