ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಅರ್ಥಪೂರ್ಣ ‘ವಿಶ್ವ ವಿಕಲಚೇತನರ ದಿನಾಚರಣೆ’
ವಿಕಲಚೇತನರು ಮನಸ್ಸು ಮಾಡಿದರೆ ಸಾಮಾನ್ಯರಂತೆ ಸಾಧನೆ ಮಾಡಬಲ್ಲರು;
ಬಸಪ್ಪ ಸುಣಧೋಳಿ
ಬೆಳಗಾವಿ: ನಗರದ ಕಿಲ್ಲಾ ಪ್ರದೇಶದಲ್ಲಿರುವ ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ (ಹಿಂದ್ವಾಡಿ) ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ‘ವಿಶ್ವಾಸ್’ ಸಂಸ್ಥೆಯ ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದ ಬಸಪ್ಪ ಸುಣಧೋಳಿ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನಗಳು ಪ್ರತಿ ವರ್ಷವೂ ಬುದ್ಧಿಮಾಂದ್ಯ ಮಕ್ಕಳೊಂದಿಗೆ ಈ ದಿನವನ್ನು ಆಚರಿಸುತ್ತಿರುವುದು ಶ್ಲಾಘನೀಯ. ವಿಕಲಚೇತನರು ಯಾರ ಮೇಲೂ ಅವಲಂಬಿತರಾಗದೆ ಸ್ವಾವಲಂಬಿಗಳಾಗಿ ಬದುಕಬೇಕು. ಇಂದು ನಮ್ಮ ಸಂಘಟನೆಯ ನಾಲ್ವರು ಸದಸ್ಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ವಿಕಲಚೇತನರು ಮನಸ್ಸು ಮಾಡಿದರೆ ಸಾಮಾನ್ಯರಂತೆ ಸಾಧನೆ ಮಾಡಬಲ್ಲರು,” ಎಂದು ಸ್ಫೂರ್ತಿ ತುಂಬಿದರು.
ಮುಖ್ಯ ಅತಿಥಿಗಳಾಗಿದ್ದ ಆರಾಧನಾ ಬುದ್ಧಿಮಾಂದ್ಯ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಗಜಾನನ್ ಎಂ. ಸುತಾರ್ ಮಾತನಾಡಿ, “ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ತರಬೇತಿ ನೀಡಿದರೆ ಅವರು ಸಾಮಾನ್ಯ ಮಕ್ಕಳಿಗಿಂತಲೂ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ. ನಮ್ಮ ಶಾಲೆಯ ಮಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯ,” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಸಾಧನೆ ಮಾಡಿದ ಗಣ್ಯರಾದ ಬಸಪ್ಪ ಸುಣಧೋಳಿ , ಈರಪ್ಪ ಬಸಪ್ಪ ಪಟಗುಂದಿ, ಲಕ್ಷ್ಮಿ ಆರ್. ರಾಯಣ್ಣವರ್, ಲಲಿತಾ ಶಂಕರ್ ಗವಸ, ರಿಯಾ ರಮೇಶ ಗೋರಲ್, ಸುಷ್ಮಾ ಪಟಗುಂದಿ, ರಾಣಿ ನಾರಾಯಣ್ ದುರ್ಗಾಯಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಲಾ ಮಠದ್ ಸ್ವಾಗತಿಸಿದರು.
ಕಾರ್ಯದರ್ಶಿ ಭಾರತಿ ರತ್ನಪ್ಪಗೊಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಜಕ್ಕನ್ನವರ್ ಮತ್ತು ರೇಣುಕಾ ಕಾಂಬಳೆ ಪ್ರಾರ್ಥಿಸಿದರು. ಪ್ರಾಯೋಜಕರಾದ ಪದ್ಮಾ ಚೌಗುಲೆ ಮತ್ತು ಸಪ್ನಾ ಚೌಗುಲೆ ಅತಿಥಿಗಳನ್ನು ಪರಿಚಯಿಸಿದರು. ಪ್ರೇಮ ಉಪಾಧ್ಯ ಪುಷ್ಪ ಸಮರ್ಪಣೆ ಮಾಡಿದರು. ರತ್ನ ಗುಡಗನಟ್ಟಿ ವಂದಿಸಿದರು ಮತ್ತು ಶೋಭಾ ಕಾಡನ್ನವರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಮಠದ್, ಶ್ರೀ ಗುಡಗನಟ್ಟಿ, ಶ್ರೀ ನೆರಳೇಕರ್, ವಿಶ್ವಾಸ್ ಫೌಂಡೇಶನ್ ಸದಸ್ಯರು, ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7