ಬೆಳಗಾವಿ: ಒಂದೆಡೆ, ದಾವಣಗೆರೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿದ ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿ ಆಡಳಿತ ಮತ್ತು ವಿಪಕ್ಷ ನಾಯಕರು ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು. ಮತ್ತೊಂದೆಡೆ ನಿಗದಿಪಡಿಸಿದ ಸುವರ್ಣ ಗಾರ್ಡನ್ ಮತ್ತು ಧಾರವಾಡ ನಾಕಾ ಪ್ರತಿಭಟನಾ ವೇದಿಕೆಗಳಲ್ಲಿ ಕಳೆದ ಐದು ದಿನಗಳಂತೆ ಇಂದೂ ಸಾಲು ಸಾಲು ಪ್ರತಿಭಟನೆಗಳು ನಡೆದವು.
ಚಳಿಗಾಲದ ಅಧಿವೇಶನದ ಆರನೇ ದಿನವೂ ಪ್ರತಿಭಟನೆಗಳಿಗೆ ಏನೂ ಬರವಿರಲಿಲ್ಲ. 10 ಸಂಘಟನೆಗಳು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಿದವು. ಕಲಾವಿದರು ಭಜನೆ ಮಾಡಿದರೆ, ವಿಶೇಷಚೇತನರು ಕುಂಟುತ್ತಾ, ತೆವಳುತ್ತಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕುಗಳಿಗಾಗಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು. ಮಾತು ಬಾರದ, ಕಿವಿ ಕೇಳಿಸದ ವಿಶೇಷಚೇತನರು ಕೈ ಸನ್ನೆ ಮೂಲಕ ಧರಣಿ ನಡೆಸಿ ಸರ್ಕಾರವನ್ನು ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.
Laxmi News 24×7