ದಾವಣಗೆರೆ: ನಮ್ಮ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಿರಂತರವಾಗಿ ಇದ್ದೇ ಇರುತ್ತದೆ ಎಂದು ಬಸವ ಧರ್ಮ ಪೀಠದ ಮಾತಾ ಗಂಗಾದೇವಿ ಪ್ರತ್ಯೇಕ ಲಿಂಗಾಯತ ಧರ್ಮದ ಧ್ವನಿ ಎತ್ತಿದರು.
ನಗರದಲ್ಲಿಂದು ಮಾತನಾಡಿದ ಅವರು, ಜನವರಿ 11ರಿಂದ ಮೂರು ದಿನಗಳ ಕಾಲ ಕೂಡಲ ಸಂಗಮದಲ್ಲಿ ಬಸವ ಧರ್ಮ ಸಮಾವೇಶ ನಡೆಸಲಾಗುತ್ತದೆ. ಮೂರು ದಿನಗಳ ಕಾಲ ಒಂದೊಂದು ಕಾರ್ಯಕ್ರಮ ನಡೆಸಲಾಗುವುದು. ಇಂದು ದಾವಣಗೆರೆಯಲ್ಲಿ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಬಸವ ಧರ್ಮದ ಜಾಗೃತಿಗಾಗಿ ಎಲ್ಲ ಕಡೆ ಸಮಾವೇಶ ಮಾಡಲಾಗುತ್ತಿದೆ. ಬಸವ ಅನುಯಾಯಿಗಳು ಒಂದೆಡೆ ಸೇರಲು ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿಯೊಂದು ಧರ್ಮದವರಿಗೂ ಒಂದೊಂದು ಪುಣ್ಯ ಕ್ಷೇತ್ರ ಇದೆ. ಅದೇ ರೀತಿ ಬಸವ ಅನುಯಾಯಿಗಳಿಗೆ ಕೂಡಲ ಸಂಗಮ ಕ್ಷೇತ್ರ ಪುಣ್ಯ ಕ್ಷೇತ್ರ ಎಂದು ಹೇಳಿದರು.
ಕನ್ನೇರಿ ಮಠದ ಕಾಡಸಿದ್ದೇಶ್ಚರ್ ಸ್ವಾಮೀಜಿ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಅವಹೇಳನ ಮಾಡಿರುವ ವಿಚಾರದ ಕುರಿತು ಮಾತನಾಡಿ, ಅಶ್ಲೀಲವಾದ ಮಾತುಗಳನ್ನು ಕಾವಿ ತೊಟ್ಟ ಮೇಲೆ ಮಾತನಾಡಬಾರದು. ವೈಚಾರಿಕವಾಗಿ ಏನಾದರೂ ವಿರೋಧ ಮಾಡಲಿ ಅದು ಸರಿ. ಆದರೆ ವೈಯಕ್ತಿಕವಾಗಿ ಮಾತನಾಡಿದರೆ ಸರಿಯಲ್ಲ. ಬಸವ ಅಭಿಯಾನ ಯಶಸ್ವಿಯಾಗಿದ್ದರಿಂದ ಖುಷಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಮಾತನಾಡೋದು ಸರಿಯಲ್ಲ ಎಂದು ಹೇಳಿದರು.
ಲಿಂಗಾಯತ ಎಂದು ಇಟ್ಟರೆ ಮಾತ್ರ ಧರ್ಮದ ಮಾನ್ಯತೆ. ಆದರೆ ವೀರಶೈವ ಲಿಂಗಾಯತ ಎಂದು ಬಂದರೆ ಮಾನ್ಯತೆ ಸಿಗೋದಿಲ್ಲ. ಹಿಂದೂ ಒಂದು ಧರ್ಮ ಅಲ್ಲ ಅದೊಂದು ಸಂಸ್ಕೃತಿ, ಇದನ್ನು ಮೋದಿಯವರೇ ಹೇಳಿದ್ದಾರೆ. ಹಿಂದೂ ಒಂದು ಅಚರಣೆಯೇ ವಿನಃ ಅದೊಂದು ಧರ್ಮ ಅಲ್ಲ. ಅಭಿಯಾನಕ್ಕೆ ಸರ್ಕಾರದಿಂದ ನಮ್ಮ ಅಕೌಂಟ್ಗೆ ಹಣ ಬಂದಿಲ್ಲ. ನಾವೇ ಹಣ ಹಾಕಿಕೊಂಡು ಅಭಿಯಾನವನ್ನು ಮಾಡುತ್ತಿದ್ದೇವೆ. ಇದಕ್ಕೆ ಸರ್ಕಾರದಿಂದ, ಸಿದ್ದರಾಮಯ್ಯನವರಿಂದ ನಮ್ಮ ಅಕೌಂಟ್ಗೆ ಹಣ ಬಂದಿಲ್ಲ ಎಂದರು.
ಧರ್ಮ ಎನ್ನುವುದೂ ಮಡಿಕೆ ಅಲ್ಲ, ಒಡೆಯಲು ಬರೋದಿಲ್ಲ. ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿಲ್ಲ. ನಮ್ಮ ಧರ್ಮದ ಬಗ್ಗೆ ಪ್ರತಿಪಾದನೆ ಮಾಡುತ್ತಿದ್ದೇವೆ. ಪಂಚಪೀಠಗಳು ಬಂದರೂ ಅವನ್ನು ನಾವು ಸೇರಿಸಿಕೊಳ್ಳುತ್ತೇವೆ. ಬಸವಣ್ಣ ಧರ್ಮಗುರು, ವಚನಗಳು ಧರ್ಮಗ್ರಂಥ, ಕೂಡಲಸಂಗಮವೇ ಪುಣ್ಯ ಕ್ಷೇತ್ರ ಎಂದು ಹೇಳಲಿ. ಆಗ ಮಾತ್ರ ಲಿಂಗಾಯತ ಧರ್ಮದಲ್ಲಿ ಬರಲಿ, ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದರು.
Laxmi News 24×7