ಹಾವೇರಿ: ಮಹಾರಾಷ್ಟ್ರದಲ್ಲಿ ಹೈಯೆಸ್ಟ್ ರಿಕವರಿ ಜಿಲ್ಲೆಗಳಿವೆ. ಹೀಗಾಗಿ, ಅಲ್ಲಿ ಕಬ್ಬಿಗೆ ಹೆಚ್ಚು ದರ ಸಿಗುತ್ತೆ. ನಮ್ಮಲ್ಲಿ ರಿಕವರಿ ಆಧಾರಿತವಾಗಿ ಹಣ ಕೊಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮಾದರಿಯಲ್ಲಿ ಕಬ್ಬಿಗೆ ಬೆಲೆ ನಿಗದಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದರು. ಎಲ್ಲಿ ರಿಕವರಿ ಕಡಿಮೆ ಇರುತ್ತೋ ಅಲ್ಲಿ ಕಡಿಮೆ ದರ ಸಿಗುತ್ತೆ, ಕೃಷ್ಣ ನದಿ ಬೆಲ್ಟ್ನಲ್ಲಿ ಕಬ್ಬಿಗೆ 11 ರಷ್ಟು ರಿಕವರಿ ಇರುತ್ತೆ, ಅಲ್ಲಿ ಜಾಸ್ತಿ ಸಿಗುತ್ತೆ ಎಂದು ಹೇಳಿದರು.

ಸಿಎಂ ಖುರ್ಚಿ ಅಲುಗಾಡ್ತಿದೆ ಎಂದು ಹೇಳ್ತಿದ್ದಾರೆ, ಅಲುಗಾಡಿಸುತ್ತಿರುವವರು ಯಾರು ಎಂಬುದು ಗೊತ್ತಾಗುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಖುರ್ಚಿನೂ ಅಲುಗಾಡಿಲ್ಲ, ಎಲ್ಲಿ ಅಲುಗಾಡಿದೆ?. ಎರಡುವರೆ ವರ್ಷ ಆಯ್ತು, ಅಲುಗಾಡಿಲ್ಲ, ಮುಂದೆಯೂ ಎರಡುವರೆ ವರ್ಷ ಅಲುಗಾಡಲ್ಲ ಎಂದು ತಿಳಿಸಿದರು.
ಸಿಎಂ ದೆಹಲಿಗೆ ಏಕೆ ಹೊರಟಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಹೈಕಮಾಂಡ್ ಇರೋದೇ ದೆಹಲಿಯಲ್ಲಿ. ಶಾಸಕರು, ಸಚಿವರು ಎಲ್ಲರೂ ಹೋಗ್ತಾರೆ, ನಮ್ಮ ಕಾರ್ಯಕರ್ತರೂ ಹೋಗ್ತಾರೆ ಎಂದು ಹೇಳಿದರು.
ಸಿಎಂ ಅವರು ಸಚಿವರನ್ನು ಊಟಕ್ಕೆ ಕರೆದು ಬಿಹಾರ ಚುನಾವಣೆಗೆ ಹಣ ಕಲೆಕ್ಷನ್ ಮಾಡಿದ್ರು ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಆರೋಪ ಮಾಡುವುದನ್ನು ಬಿಟ್ಟು ಎರಡುವರೆ ವರ್ಷದಿಂದ ಏನು ಕೆಲಸ ಮಾಡಿದ್ದಾರೆ. ಕೇಂದ್ರದಿಂದ ಏನಾದ್ರು ಅನುದಾನ ತಂದಿದಾರಾ? ಇಲ್ಲಿಯವರೆಗೆ ಅತಿವೃಷ್ಟಿ ಆಯ್ತು ಅಂತ ಬಾಯ್ ಮಾತಲ್ಲಿ ಹೇಳ್ತಾರೆ. ಹಣ ಬಿಡುಗಡೆ ಮಾಡಿಸೋ ಪ್ರಯತ್ನ ಮಾಡಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ನವೆಂಬರ್ ಕ್ರಾಂತಿಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನವೆಂಬರ್ನಲ್ಲಿ ಯಾವ ಕ್ರಾಂತಿನೂ ಆಗಲ್ಲ, ಸಂಪುಟ ವಿಸ್ತರಣೆ ಆ ಸಂದರ್ಭದಲ್ಲಿ ಏನು ಆಗುತ್ತೋ ಆಗುತ್ತೆ ಎಂದರು.
ಹಾವೇರಿ ಜಿಲ್ಲೆಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 100% ತಪ್ಪಿಲ್ಲ. ಎಲ್ಲಾ ಶಾಸಕರಿಗೂ ಸಚಿವರಾಗುವ ಆಸೆ ಇರುತ್ತದೆ. ಸ್ವಾಭಾವಿಕವಾಗಿ ನಮ್ಮ ಪಕ್ಷದಲ್ಲಿಯೂ ಇದೆ. ಸಿಗಲೇಬೇಕು ಅದರಲ್ಲಿ ತಪ್ಪೇನಿದೆ, ಎಲ್ಲಾ ಜಿಲ್ಲೆಗೂ ಪ್ರಾತಿನಿಧ್ಯ ಸಿಗಬೇಕು. ಹಾವೇರಿ ಜಿಲ್ಲೆಗೂ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿ. ಒಂದು ಕಾಲದಲ್ಲಿ ನನಗೆ ಹಾಗೂ ಎಂ. ಬಿ. ಪಾಟೀಲರಿಗೂ ಸಿಕ್ಕಿರಲಿಲ್ಲ ಎಂದು ಹೇಳಿದರು.
ಈ ಬಾರಿ ಅತಿವೃಷ್ಟಿಯಿಂದಾದ ಹಾನಿಗೆ ಕೇಂದ್ರದಿಂದ ಅನುದಾನ ಕೇಳಿದ್ದೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರಕ್ಕೆ 15,500 ಕೋಟಿ ಅನುದಾನ ಕೇಳುವ ಪ್ರಸ್ತಾಪವನ್ನು ಕ್ಯಾಬಿನೆಟ್ನಲ್ಲಿ ಸಲ್ಲಿಸಿದ್ದೇವೆ. ಬೇರೆ ರಾಜ್ಯಗಳಿಗೂ ಕೊಟ್ಟಿದೆ, ಹಾಗೆಯೇ ನಮಗೂ ಅನುದಾನ ಕೊಡಲಿ ಎಂದು ನಿರೀಕ್ಷೆ ಇದೆ. ಅನುದಾನ ಕೊಡಿಸುವ ಜವಾಬ್ದಾರಿ ಎಲ್ಲ ಸಂಸದರ ಮೇಲೆಯೂ ಇದೆ ಎಂದು ತಿಳಿಸಿದರು.
Laxmi News 24×7