ಮೈಸೂರು: ಸರಗೂರು ತಾಲೂಕಿನ ಬಡಗಲಾಪುರದಲ್ಲಿ ಹುಲಿ ದಾಳಿಗೆ ತುತ್ತಾದ ಮಹದೇವ (ಮಾದೇಗೌಡ) ಎಂಬವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಕುಟುಂಬಕ್ಕೆ ಸಂಪೂರ್ಣ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಚಿಕಿತ್ಸೆಗೆ ಒಳಗಾಗಿರುವ ಮಹದೇವ ಗೌಡ ಅವರ ಕುಟುಂಬದವರ ಜೊತೆ ಚರ್ಚಿಸಿ, ಬಳಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎರಡು ಕಣ್ಣುಗಳ ದೃಷ್ಟಿ ಮತ್ತೆ ಬರುವ ಸಾಧ್ಯತೆ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪರಿಹಾರವನ್ನು ಗಾಯಾಳು ಲೆಕ್ಕದಲ್ಲಿ ಕೊಡಬಾರದು. ಬದುಕು ಕಳೆದುಕೊಂಡ, ಕುಟುಂಬದ ಆಸರೆ ಕಳೆದುಕೊಂಡವರ ಲೆಕ್ಕದಲ್ಲೇ ಪೂರ್ತಿಯಾಗಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ಹುಲಿದಾಳಿ: ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿ ಸೆರೆಗೆಂದು ನಡೆಸಲಾದ ಕೂಂಬಿಂಗ್ ವೇಳೆ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ಬಡಗಲಪುರ ಗ್ರಾಮದಲ್ಲಿ ಮಧ್ಯಾಹ್ನ ನಡೆದಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕಳೆದ ವಾರದಿಂದ ಹುಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದರಿಂದಾಗಿ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಅರಣ್ಯ ಇಲಾಖೆ ನಾಲ್ಕೈದು ದಿನಗಳಿಂದ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಇದಲ್ಲದೇ ಬೋನ್ ಇರಿಸಿತ್ತು. ಗುರುವಾರ ಮತ್ತೆ ಕೂಂಬಿಂಗ್ ಕಾರ್ಯಾಚರಣೆ ನಡೆಸುವಾಗ ಹುಲಿ ಗ್ರಾಮದ ಬೋಳೆಗೌಡನಕಟ್ಟೆ ಕೆರೆ ಬಳಿ ಅವಿತು ಕುಳಿತಿತ್ತು. ಇದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಬಳಿ ಯಾರೂ ಹೋಗದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಹುಲಿ ಗಾಬರಿಗೊಂಡು ಕುಮಾರ್ ಎಂಬವರ ತೋಟದ ಕಡೆಗೆ ಓಡಿದ್ದು, ನಂತರ ಮತ್ತೆ ಅಲ್ಲಿಂದ ನುಗು ಅರಣ್ಯದ ಕಡೆಗೆ ಓಡಿ ಹೋಗಿ ಪೊದೆಯಲ್ಲಿ ಅವಿತಿತ್ತು.
ಹುಲಿ ಸೆರೆಗೆ ಅಭಿಮನ್ಯು, ಭಗೀರಥ ಎಂಬ ಸಾಕಾನೆಗಳನ್ನು ಕರೆಯಿಸಿಕೊಂಡ ಅರಣ್ಯ ಇಲಾಖೆಯು ಸಾಕಾನೆಯನ್ನು ಪೊದೆಗೆ ಬಿಟ್ಟರು. ಇದರಿಂದ ಹೆದರಿದ ಹುಲಿ ಪೊದೆಯಿಂದ ಹೊರ ಬಂದು ಮತ್ತೆ ಕಾಡಿನತ್ತ ಓಡಿತು. ಆಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವ್ ಎಂಬವರ ಮೇಲೆ ದಾಳಿ ಮಾಡಿದೆ. ಮಹದೇವ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಅವರ ಮುಖ, ಕೈ ಹಾಗು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.