ಬೆಂಗಳೂರು: ಲಿಂಗಾಯತ ಮಠಾಧಿಪತಿಗಳ ಕುರಿತು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿ ಮಾತನಾಡಿರುವ ಕನೇರಿ ಮಠದ ಕಾಡುಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡು ಕ್ಷಮೆ ಕೋರಬೇಕು ಎಂದು ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹಿರಿಯ ಸ್ವಾಮೀಜಿಗಳು ಕನೇರಿ ಶ್ರೀಗಳ ಹೇಳಿಕೆಯನ್ನು ಖಂಡಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನವನ್ನು ಟೀಕಿಸುವ ಭರದಲ್ಲಿ ಮಾತನಾಡಿರುವ ಕನೇರಿ ಮಠದ ಕಾಡುಸಿದ್ದೇಶ್ವರ ಸ್ವಾಮೀಜಿಯವರು “ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕದ ತಂಡ ಎಂದಿರುವುದಲ್ಲದೇ, ಅಸಹ್ಯಕರ ಪದ ಬಳಕೆ ಮಾಡಿದ್ದಾರೆ. ನಮಗಿಂತ ಹಿರಿಯರು, ನಮ್ಮ ತಾಯಿಗಿಂತಲೂ ಅವರ ತಾಯಿ ಒಂದು ತೂಕ ಹೆಚ್ಚೆಂದೇ ನಾವು ಭಾವಿಸುತ್ತೇವೆ. ಮೇಲಾಗಿ ಸಿದ್ದೇಶ್ವರ ಶ್ರೀಗಳ ಶಿಷ್ಯರಾದ ಅವರು ಈ ರೀತಿಯ ಮಾತುಗಳನ್ನು ಆಡಿರುವುದು ಸರಿಯಲ್ಲ. ಇದು ನಮ್ಮ ಮಠದ ಭಕ್ತರಿಗೆ ಆಘಾತ ಉಂಟುಮಾಡಿದೆ” ಎಂದು ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮೀಜಿಯವರು ಖಂಡಿಸಿದ್ದಾರೆ.
“ಇದೆಲ್ಲದರ ಬಳಿಕ ಕನೇರಿ ಶ್ರೀಗಳಿಗೆ ಒಂದು ಜಿಲ್ಲೆಗೆ ಪ್ರವೇಶಿಸಲು ನಿರ್ಬಂಧ ವಿಧಿಸಿದರೆ ಬಿಜೆಪಿ ನಾಯಕರು ಖಂಡಿಸುತ್ತಾರೆ. ರಾಜಕೀಯವಾಗಿ ಏನಾದರೂ ಮಾತನಾಡಿ ಬಿಜೆಪಿ ನಾಯಕರೇ ಆಗ ನಿಮ್ಮನ್ನು ಜನ ಗಮನಿಸುತ್ತಿದ್ದಾರೆ. ಆ ಸ್ವಾಮಿಗಳಿಗೆ ನಿರ್ಬಂಧದ ಕುರಿತು ಮಾತನಾಡುವ ನೀವು, ಅವರಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾದ ಬಗ್ಗೆ ಯಾರೂ ಯಾಕೆ ಮಾತನಾಡಲಿಲ್ಲ” ಎಂದು ಅವರು ಪ್ರಶ್ನಿಸಿದರು.
Laxmi News 24×7