ರಾಯಚೂರು: ದೇವದುರ್ಗ ಶಾಸಕಿ ಜಿ. ಕರೆಮ್ಮಾ ನಾಯಕ್ ತೆರಳುತ್ತಿದ್ದ ಕಾರು ಅಪಘಾತವಾಗಿದ್ದು, ಶಾಸಕಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ಪೈದೊಡ್ಡಿ ಕ್ರಾಸ್ ಹತ್ತಿರ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ.
ಮದುವೆ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಇಂದು ದೇವದುರ್ಗದಿಂದ ಹುಬ್ಬಳ್ಳಿಗೆ ಕುಟುಂಬ ಸಮೇತವಾಗಿ ಶಾಸಕಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಕರೆಮ್ಮಾ ಅವರು ಕುಳಿತಿದ್ದ ಕಾರಿನ ಮುಂದೆ ಹೋಗುತ್ತಿದ್ದ, ಕರೆಮ್ಮಾ ಅವರಿಗೆ ಸೇರಿದ ಮತ್ತೊಂದು ಕಾರು ಅಪಘಾತವಾಗಿದೆ. ಮುಂದೆ ಹೋಗುತ್ತಿದ್ದ ಕಾರಿಗೆ ನಾಯಿ ಅಡ್ಡ ಬಂದಿದೆ. ಆಗ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಬೆಟ್ಟಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂದೆ ಇದ್ದ ಕರೆಮ್ಮಾ ಅವರು ಪ್ರಯಾಣಿಸುತ್ತಿದ್ದ ಕಾರು, ಆ ಕಾರಿಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು, ಘಟನೆಯಲ್ಲಿ ಶಾಸಕಿ ಕರೆಮ್ಮಾ ನಾಯಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತವಾದ ಕೂಡಲೇ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಶಾಸಕಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಈ ವೇಳೆ ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ ಸಹ ಆಸ್ಪತ್ರೆಗೆ ಭೇಟಿ ಕುಶಲೋಪರಿ ವಿಚಾರಿಸಿದ್ದಾರೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Laxmi News 24×7