ಬೆಳಗಾವಿ: ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಪ್ರತಿಷ್ಠಿತ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೆಪ್ಟೆಂಬರ್ 29ರಂದು ನಡೆದ ಚುನಾವಣೆಯಲ್ಲಿ ರೈತರ ಪುನಶ್ಚೇತನ ಪ್ಯಾನಲ್ 5 ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸುವ ಮೂಲಕ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುಕ್ಕಾಣಿ ಹಿಡಿದಿದ್ದರು. ಶಾಸಕ ಬಾಬಾಸಾಹೇಬ ಪಾಟೀಲರ ನೇತೃತ್ವದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿನ್ನೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ಇಬ್ಬರೂ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮುನ್ನ, ಈ ಭಾಗದ ಶಕ್ತಿ ದೇವತೆ ಶ್ರೀ ಬಂಡೆಮ್ಮ ದೇವಿ ಹಾಗೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು ಜವಾಬ್ದಾರಿ ವಹಿಸಿಕೊಂಡರು.ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, “ಕಾರ್ಖಾನೆ ಉಳಿಸಿ-ಬೆಳೆಸುತ್ತಾರೆಂಬ ನಂಬಿಕೆಯಿಂದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ ಪೆನಲ್ಗೆ ರೈತರು ಬೆಂಬಲಿಸಿ, ಎಲ್ಲ 15 ಜನರನ್ನು ಆರಿಸಿ ತಂದಿದ್ದಾರೆ. ರೈತರು ಇಟ್ಟ ನಂಬಿಕೆಗೆ ದ್ರೋಹ ಆಗದಂತೆ ಕಾರ್ಖಾನೆ ಅಭಿವೃದ್ಧಿಪಡಿಸುವ ಜವಾಬ್ದಾರಿ ಎಲ್ಲ 15 ಜನ ನಿರ್ದೇಶಕರ ಮೇಲಿದೆ. ಕಾರ್ಖಾನೆ ಅಭಿವೃದ್ಧಿ ಕನಸು ಹೊತ್ತು ಬಂದವರಿವರು. ಪಾರದರ್ಶಕ ಆಡಳಿತದ ಮೂಲಕ ನೂತನ ದಿಗ್ದರ್ಶಕ ಮಂಡಳಿ ಕಾರ್ಖಾನೆಗೆ ಮೊದಲಿನ ಗತವೈಭವ ಮರಳಿಸಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Laxmi News 24×7