ರಾಯಚೂರು: ಸಿನಿಮಾ ನೋಡಲು ಹೋಗಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ.
ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ನಿವಾಸಿಗಳಾದ ಯಲ್ಲಾಲಿಂಗ (28), ವೆಂಕಟೇಶ ಮೋಚಿ (30) ಮೃತಪಟ್ಟ ಯುವಕರೆಂದು ಗುರುತಿಸಲಾಗಿದೆ.
ಮಸ್ಕಿ ಪಟ್ಟಣದ ಬಳಗಾನೂರು ರಸ್ತೆಗೆ ಬರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಈ ಇಬ್ಬರು ಈಜಲು ತೆರಳಿದ್ದರು.
ಮುದಗಲ್ ಪಟ್ಟಣದ ನಾಲ್ವರು ಸ್ನೇಹಿತರು ಶನಿವಾರ ಮಸ್ಕಿ ಪಟ್ಟಣಕ್ಕೆ ಕಾಂತಾರ ಸಿನಿಮಾ ನೋಡಲು ಆಗಮಿಸಿದ್ದರು. ಮಧ್ಯಾಹ್ನದ ಶೋ ನೋಡಲು ಹೋದಾಗ ಟಿಕೆಟ್ ಸಿಕ್ಕಿರಲಿಲ್ಲ. ಸಂಜೆಯ ಶೋಗೆ ಹೋಗೋಣ ಎಂದು ನಿರ್ಧರಿಸಿ ಪಟ್ಟಣದ ಎಡದಂಡೆ ಕಾಲುವೆಗೆ ಈಜಲು ಹೋಗಿದ್ದಾರೆ. ಈ ವೇಳೆ ನಾಲ್ವರಲ್ಲಿ ಯಲ್ಲಾಲಿಂಗ ಹಾಗೂ ವೆಂಕಟೇಶ ಈಜುವುದಕ್ಕೆ ಕಾಲುವೆ ಇಳಿದಿದ್ದರು. ಯಲ್ಲಾಲಿಂಗನಿಗೆ ಈಜಲು ಅಷ್ಟಕಷ್ಟೇ ಬರುತ್ತಿದ್ದರಿಂದ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ. ವೆಂಕಟೇಶ ರಕ್ಷಿಸಲು ಹೋದಾಗ ಇಬ್ಬರೂ ನೀರು ಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಹುಡುಕಾಟ ನಡೆಸಿದ್ದರು. ರಾತ್ರಿ ಆಗಿದ್ದರಿಂದ ಶೋಧ ಕಾರ್ಯಾಚರಣೆ ನಿಲ್ಲಿಸಿ, ಇಂದು ಪುನಃ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದು, ಇಬ್ಬರ ಮೃತದೇಹ ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಲಿಂಗಸೂಗೂರು ಆಸ್ಪತ್ರೆಗೆ ರವಾನಿಸಲಾಗಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7