ಹಾವೇರಿ: ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಏನು ನಮೂದು ಮಾಡಬೇಕು ಎಂಬ ಬಗ್ಗೆ ಇದೇ ಸೆಪ್ಟಬರ್ 17 ರಂದು (ಬುಧವಾರ) ಸ್ಪಷ್ಟ ನಿರ್ಧಾರ ತಗೆದುಕೊಳ್ಳುತ್ತೇವೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಲಿಯವರೆಗೂ ಪಂಚಮಸಾಲಿಗಳು ಯಾವುದೇ ನಿರ್ಧಾರ ಕೈಗೊಳ್ಳಬಾರದು. ಪಂಚಮಸಾಲಿ ವಿಚಾರದಲ್ಲಿ ಕರ್ನಾಟಕದ ಯಾವುದೇ ಮಠ, ಸ್ವಾಮೀಜಿಗಳ ಹೇಳಿಕೆಗಳಿಗೆ ಕಿವಿಗೊಡಬೇಡಿ ಎಂದು ಕರೆ ನೀಡಿದರು.
ಪಂಚಮಸಾಲಿಗಳಿಗೂ ಅವರಿಗೂ ಸಂಬಂಧ ಇಲ್ಲ. ಯಾವುದೇ ಸಂಘಟನೆ, ಬೇರೆ ಸಮಾಜದ ಸ್ವಾಮೀಜಿಗಳ ಹೇಳಿಕೆಗೆ ಭಕ್ತರು ಮಹತ್ವ ಕೊಡಬಾರದು. ಸೆಪ್ಟಂಬರ್ 17 ರಂದು ಬೆಂಗಳೂರಿನ ಗೋಲ್ಡ್ ಪಿಂಚ್ ಹೋಟೆಲ್ನಲ್ಲಿ ರಾಜ್ಯ ಮಟ್ಟದಲ್ಲಿ ಮತ್ತೊಂದು ಸಭೆ ಮಾಡುತ್ತೇವೆ. ಇದರಲ್ಲಿ ಪಂಚಮಸಾಲಿಯ ಮೂರು ಪೀಠಗಳ ಸ್ವಾಮೀಜಿಗಳು ಮತ್ತು ಪಂಚಮಸಾಲಿ ಮಠಗಳ 80ಕ್ಕೂ ಅಧಿಕ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಭಕ್ತರ ಜೊತೆ ಸಮಾಲೋಚನೆ ನಡೆಸಲು ಎಲ್ಲಾ ಸ್ವಾಮೀಜಿಗಳು ಪ್ರವಾಸ ಮಾಡ್ತಿದ್ದಾರೆ. ಭಕ್ತರ ಜೊತೆ ಸಮಾಲೋಚನೆ ಮಾಡುತ್ತೇವೆ. ಒಂದು ಸ್ಪಷ್ಟ ನಿರ್ಧಾರ ಪ್ರಕಟಿಸುತ್ತೇವೆ. ಹಿಂದೆ ವೀರಶೈವ ಲಿಂಗಾಯತ ಮಹಾಸಭಾದಿಂದ ವೀರಶೈವ ಲಿಂಗಾಯತ ಧರ್ಮ ಅಂತ ನಮೂದಿಸಲು ಮನವಿ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯನವರು ಕೂಡಾ ತಮ್ಮ ಹಿಂದಿನ ಅವಧಿಯಲ್ಲಿ ಲಿಂಗಾಯತ ಧರ್ಮಕ್ಕೆ ರೆಫರ್ ಮಾಡಿದ್ದರು. ಆದರೆ ಅದನ್ನು ಕೇಂದ್ರ ಸರ್ಕಾರ ಪುರಸ್ಕರಿಸಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ಸಿಎಂ ಸಿದ್ದರಾಮಯ್ಯನವರು ಕೂಡಾ ಇದು ಧರ್ಮದ ಸಮೀಕ್ಷೆ ಅಲ್ಲ ಅಂದಿದ್ದಾರೆ. ಹೀಗಾಗಿ ನಾಳೆ ನಡೆಸಲಿರುವ ಸಭೆಯಲ್ಲಿ ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗ ನಡೆಯುತ್ತಿರುವುದು ಮರು ಸಮೀಕ್ಷೆ, 15 ದಿನ ಸಮೀಕ್ಷೆ ಸಮಯ ಇದೆ. ಅದಕ್ಕಾಗಿ ಒಮ್ಮತದ ನಿರ್ಣಯ ಕೈಗೊಳ್ಳುತ್ತೇವೆ. ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ಮತ್ತೆ ಸಾಮಾಜಿಕ ಶೈಕ್ಷಣಿಕ ಗಣತಿ ಮಾಡುತ್ತಿದೆ. ಈ ಬಾರಿ ಹಿಂದುಳಿದ ವರ್ಗಗಳ ಆಯೋಗದಲ್ಲಿ 1,561 ಜಾತಿಗಳು ಇವೆ ಅಂತ ತಿಳಿಸಿದ್ದಾರೆ. ಅದರಲ್ಲಿ ಮೂರು ಕಡೆ ಪಂಚಮಸಾಲಿ ಬಂದಿದೆ. ಈ ಹಿಂದೆ ಎರಡು ಬಾರಿ ಬಂದಿತ್ತು ಎಂದರು.
ಈ ಬಾರಿ ಜೈನ ಪಂಚಮಸಾಲಿ ಅಂತ ಹೊಸದಾಗಿ ಸೇರಿಸಿದ್ದಾರೆ. ಇನ್ನೆರಡು ಕಡೆ ಲಿಂಗಾಯತ ಪಂಚಮಸಾಲಿ ಹಾಗೂ ವೀರಶೈವ ಪಂಚಮಸಾಲಿ ಅಂತ ಬಂದಿದೆ. ಈ ಬಗ್ಗೆ ಭಕ್ತರ ಜೊತೆ ಸಭೆ ಮಾಡ್ತಿದ್ದೇವೆ. ಈಗಾಗಲೇ 15 ಜಿಲ್ಲೆಗಳ ಭಕ್ತರ ಅಭಿಪ್ರಾಯದ ವಿಡಿಯೋ ರೆಕಾರ್ಡಿಂಗ್ ಮಾಡಿದ್ದೇವೆ. ನಮ್ಮ ಸಮಾಜದ ಮಕ್ಕಳಿಗೆ ಸಾಮಾಜಿಕ, ಔದ್ಯೋಗಿಕವಾಗಿ ಅನುಕೂಲ ಆಗಬೇಕು. ಆ ನಿಟ್ಟಿನಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
Laxmi News 24×7