ತುಮಕೂರು: ಸಚಿವ ಸಂಪುಟದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಅವರ ನಿವಾಸಕ್ಕೆ ವಿವಿಧ ಮಠಗಳ 15ಕ್ಕೂ ಹೆಚ್ಚು ಸ್ವಾಮೀಜಿಗಳು ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಚಿತ್ರದುರ್ಗದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, “ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಿರುವುದು ಇಡೀ ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ. ಅವರನ್ನು ವಾಪಸ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂಬ ಆಶಯದೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸುತ್ತಿದ್ದೇವೆ” ಎಂದು ತಿಳಿಸಿದರು.
“ಕೆ.ಎನ್.ರಾಜಣ್ಣ ಅವರಿಂದ ಸಮುದಾಯಕ್ಕೆ ಸಾಕಷ್ಟು ಕೆಲಸಗಳು ಆಗಬೇಕಿದೆ. ಸಂಪುಟದಿಂದ ತೆಗೆದು ಹಾಕಿರುವುದರಿಂದ ಸಮುದಾಯ ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ ನಮ್ಮ ಮನವಿಯನ್ನು ಪುರಸ್ಕರಿಸಿ ವಾಪಸ್ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ವಿಶ್ವಾಸವಿದೆ” ಎಂದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, “ವಿವಿಧ ಮಠಾಧೀಶರು ಇಂದು ನನ್ನ ಮನೆಗೆ ಬಂದು ನನಗೆ ಆಗಿರುವ ಅನ್ಯಾಯದ ಕುರಿತು ಮಾತುಕತೆ ನಡೆಸಿದರು. ಅಲ್ಲದೆ ನಾನೂ ಕೂಡ ಈ ಅನ್ಯಾಯದ ಹಿಂದಿನ ವಿಷಯವನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ. ಆಶೀರ್ವಾದ ಮಾಡಿರುವ ಸ್ವಾಮೀಜಿಗಳು ನನಗೆ ಬೆಂಬಲ ಸೂಚಿಸಿದ್ದಾರೆ” ಎಂದು ಹೇಳಿದರು.
“ಸ್ವಾಮೀಜಿಗಳ ಬೇಡಿಕೆ ಹಾಗೂ ಮನವಿಗೆ ನಾನು ಯಾವುದೇ ರೀತಿಯ ಉತ್ತರ ಕೊಡುವ ಸ್ಥಾನದಲ್ಲಿಲ್ಲ. ನನ್ನನ್ನು ಸಚಿವ ಸಂಪುಟದಿಂದ ತೆಗೆದು ಹಾಕಲು ಸಾಕಷ್ಟು ವಿಚಾರಗಳಿವೆ. ಅದನ್ನು ಸರಿಯಾದ ಸಮಯದಲ್ಲಿ ತಿಳಿಸುತ್ತೇನೆ. ಈ ಕುರಿತು ಹೈಕಮಾಂಡ್ ಹಾಗೂ ಮುಖಂಡರ ಬಳಿ ತೆರಳಿ ಎಲ್ಲಾ ವಿಷಯವನ್ನು ತಿಳಿಸಿದ್ದೇನೆ” ಎಂದರು.
Laxmi News 24×7