ಬೆಂಗಳೂರು; ಜಾತಿಗಳಿಗೆ, ಮಠಗಳಿಗೆ ಕೋಟ್ಯಾಂತರ ಹಣವನ್ನು ನೀಡುತ್ತಾ “ಮತ ರಾಜಕಾರಣ” ಮಾಡುವ ಬದಲು ಸರ್ಕಾರವು ನಾಡಿನ ಭಾಷೆಯಾದ ಕನ್ನಡಕ್ಕಾಗಿಯೇ ಇರುವ ಏಕೈಕ ವಿವಿಗೆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ಈ ಮೂಲಕ ಕನ್ನಡದ ಸಂಶೋಧನೆಗಳು, ಕನ್ನಡದ ಹಳಮೆಯನ್ನು ಸಾಧಿಸುತ್ತಲೇ ಕನ್ನಡದ ನಾಳೆಯನ್ನು ಕಟ್ಟಬಹುದಾದ ಕನ್ನಡದ್ದೇ ಕೆಲಸಗಳನ್ನು ಮಾಡಲು ಆದ್ಯತೆ ನೀಡಬೇಕು. ತುರ್ತಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಚಲನಚಿತ್ರ ನಿರ್ದೇಶಕ, ರಂಗಕರ್ಮಿ ಬಿ.ಸುರೇಶ ಆಗ್ರಹಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಹಂಪಿ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಆರಂಭಿಸಿರುವ ‘ಭಿತ್ತಿಪತ್ರ ಚಳವಳಿ’ಯ ಎರಡನೇ ದಿನವಾದ ಇಂದು ಅನೇಕ ಸಾಮಾಜಿಕ ಹೋರಾಟಗಾರರು, ಚಿತ್ರರಂಗದ ಗಣ್ಯರು, ಸಾಹಿತಿಗಳು, ಸಂಘಟನೆಗಳ ಮುಖಂಡರು ಆಂದೋಲನದಲ್ಲಿ ಪಾಲ್ಗೊಂಡು ಕನ್ನಡ ವಿಶ್ವವಿದ್ಯಾಲಯದ ಕುರಿತು ರಾಜ್ಯ ಸರ್ಕಾರ ಹೊಂದಿರುವ ತಾತ್ಸಾರ ಧೋರಣೆಯನ್ನು ಖಂಡಿಸಿದ್ದಾರೆ.ಸಾಮಾಜಿಕ ಚಿಂತಕ ಗ್ಲಾಡ್ ಸನ್ ಅಲ್ಮೀಡಾ ತಮ್ಮ ಹೇಳಿಕೆಯಲ್ಲಿ, ಕರ್ನಾಟಕದಲ್ಲೇ ಇರುವ ಕನ್ನಡ ವಿವಿಗೆ ಅದರ ಹಕ್ಕಿನ ಅನುದಾನವನ್ನು ಬಿಡುಗಡೆಗೊಳಿಸಿ ಎಂದು ಕರ್ನಾಟಕ ಸರಕಾರವನ್ನು ಈ ರೀತಿ ಅಭಿಯಾನದ ಮೂಲಕ ಕೇಳಬೇಕಾದ ಪರಿಸ್ಥಿತಿಗೆ ನಮ್ಮನ್ನು ತಂದಿಟ್ಟಿರುವ ಸರಕಾರ ತಾನು ಕನ್ನಡ ವಿರೋಧಿ, ಕನ್ನಡ ರಾಷ್ಟ್ರೀಯತೆಯ ವಿರೋಧಿ, ನಾಡದ್ರೋಹಿ ಎಂದು ತಾನಾಗಿಯೇ ಸಾಬೀತುಪಡಿಸಿದೆ. ಕನ್ನಡಿಗರಿಗೆ ಕನ್ನಡ ಕೇವಲ ಭಾಷೆಯಲ್ಲ ಬದಲಾಗಿ ಅಸ್ತಿತ್ವ, ಅಸ್ಮಿತೆ ಹಾಗೂ ರಾಷ್ಟ್ರೀಯತೆ. ಇದನ್ನು ಕಾರ್ಯಗತಗೊಳಿಸುವ ಕನ್ನಡ ವಿವಿಗೆ ಸರಕಾರ ಮಾಡುತ್ತಿರುವ ಅವಮಾನ, ಕನ್ನಡಿಗರಿಗೆ ಮಾಡಿದ ಅವಮಾನ. ಹಾಗಾಗಿ ಈ ಸರಕಾರಕ್ಕೆ ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಈ ಕೂಡಲೇ ತನ್ನ ಭಂಡತನವನ್ನು ಬದಿಗೆ ಸರಿಸಿ, ಅನುದಾನವನ್ನು ಬಿಡುಗಡೆಗೊಳಿಸಲಿ ಎಂದು ಒತ್ತಾಯಿಸಿದ್ದಾರೆ.
ಹಂಪಿಯಲ್ಲಿನ ಒಡೆದ ಗುಡಿಗಳು, ಮುರಿದ ದೇವತಾ ವಿಗ್ರಹಗಳು ಕರ್ನಾಟಕ ಸಾಮ್ರಾಜ್ಯ ಇಲ್ಲಿತ್ತು ಎಂದು ನೆನಪು ಮಾಡುವ ನೆನೆಯುಳಿಕೆಗಳು.. ಈ ನೆಲದಲ್ಲಿ ಕನ್ನಡಿಗರು ಜಗತ್ತಿಗೇ ಹಿರಿಯರಾಗಿ ಬಾಳಿದ್ದರು ಎನ್ನುವ ದಿಟ ನೀಡುವ ಹುರುಪಿನಿಂದ ಕನ್ನಡ ಕಟ್ಟುವ ಕೆಲಸ ಹೊಸ ಬಿರುಸು ಗಳಿಸಲಿ ಎಂಬ ಆಶಯದಿಂದ ಶುರು ಮಾಡಲಾದ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಇದೇ ಪಳೆಯುಳಿಕೆಗಳ ಸಾಲಲ್ಲಿ ನಿಲ್ಲಿಸುವ ಕೆಲಸ ಆಗದಿರಲಿ. ಹಂಪಿ ವಿಶ್ವವಿದ್ಯಾಲಯಕ್ಕೆ ಬೇಕಾದ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಲಿ ಎಂದು ಬನವಾಸಿ ಬಳಗದ ಅಧ್ಯಕ್ಷ ಆನಂದ್ ಆಗ್ರಹಿಸಿದ್ದಾರೆ.
Laxmi News 24×7