ಗಣೇಶ ಚತುರ್ಥಿ ಸಂಭ್ರಮಕ್ಕೆ ವಿಜಯಪುರ ಜಿಲ್ಲೆ ಸಿದ್ಧಗೊಳ್ಳುತ್ತಿದ್ದು, ನಗರದ ವಿವಿಧೆಡೆ ಬಗೆಬಗೆಯ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳು ಕಲಾವಿದರ ಕೈಯಲ್ಲಿ ಸುಂದರವಾಗಿ ಅರಳಿ ನಿಂತಿವೆ. ವಿಘ್ನ ನಿವಾರಕನ ಆಗಮನಕ್ಕೆ ಇನ್ನೂ ಮೂರು ದಿನ ಬಾಕಿ ಇದೆ.
ನಗರದ ವಿವಿಧ ಭಾಗಗಳಲ್ಲಿ 10ಕ್ಕೂ ಅಧಿಕ ಕಲಾವಿದರ ಕುಟುಂಬಗಳು ಗಣಪತಿ-ಗೌರಿ ಮೂರ್ತಿಗಳನ್ನು ಸಿದ್ಧಪಡಿಸಿವೆ. ಈಗಾಗಲೇ ಕಲಾವಿದರು ಗಣೇಶ ಮೂರ್ತಿಗಳಿಗೆ ಕಲರ್ ನೀಡುತ್ತಿದ್ದು,
ಮೂರ್ತಿಗಳ ಬುಕ್ಕಿಂಗ್ ಕೂಡ ಆರಂಭವಾಗಿದೆ. ಇದೆಲ್ಲದರ ಮಧ್ಯೆ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮೂರ್ತಿಗಳಿಗೆ ನಿಷೇಧವಿದ್ದರೂ ಮಾರಾಟ ನಡೆದಿದೆ.ಜಿಲ್ಲೆಯಲ್ಲಿ ಮಣ್ಣಿನ ಗಣೇಶ ಮೂರ್ತಿ ಬೇಡಿಕೆ ಹೆಚ್ಚಾಗಿದ್ದರಿಂದ ಬೇರೆ ಜಿಲ್ಲೆಗಳಿಂದ ಸಾವಿರಾರು ಗಣೇಶ ಮೂರ್ತಿಗಳನ್ನು ತರಿಸಿಕೊಳ್ಳಲಾಗಿದೆ.
ಇನ್ನೂ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳ ಖರೀದಿಗೆ ಜನರು ಹೆಚ್ಚು ಉತ್ಸುಕರಾಗಿದ್ದಾರೆ. ಹೀಗಾಗಿ ಸಾವಿರಾರು ಜನ ಮೂರ್ತಿಗಳಿಗೆ ಮುಂಗಡ ಹಣ ನೀಡಿ ಬುಕ್ ಮಾಡುತ್ತಿದ್ದಾರೆ.
ಜತೆಗೆ, ತಯಾರಕರು ಅರ್ಧ ಅಡಿಯಿಂದ ಹಿಡಿದು ಆರು ಅಡಿ ಎತ್ತರದವರೆಗಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಒಂದೊಂದು ಮೂರ್ತಿಯೂ ವಿಭಿನ್ನ ಶೈಲಿಯೊಂದಿಗೆ ನೋಡುಗರನ್ನು ಆಕರ್ಷಿಸುತ್ತಿವೆ. ಈಗಾಗಲೇ ಕೆಲ ಬಡಾವಣೆಗಳಲ್ಲೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಯುವಕರ ಗುಂಪುಗಳು ಗಣೇಶ ಹಬ್ಬ ಆಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿವೆ. ಹಾಗಾಗಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
Laxmi News 24×7