ರೈತರೊಂದಿಗೆ ಚೆಲ್ಲಾಟ ಆಡ್ತಾ ಇದೇಯಾ ಕೃಷಿ ಇಲಾಖೆ..?
ಸಹಕಾರಿಯಲ್ಲಿ 260 ರೂ. – ಖಾಸಗಿಯಲ್ಲಿ 410 ರೂ.ಗೆ ಯೂರಿಯಾ ಮಾರಾಟ!!
ಉತ್ತಮ ಮಳೆಯ ನಿರೀಕ್ಷೆಯಲ್ಲಿ ಭತ್ತದ ಲಾವಣಿಗೆ ತಯಾರಾಗಿದ್ದ ಬಾಗಲಕೋಟೆ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆಯ ನಿರ್ಲಕ್ಷ್ಯ ಭಾರೀ ಹೊಡೆತ ನೀಡಿದೆ. ಜಿಲ್ಲೆಯಾದ್ಯಂತ ಯೂರಿಯಾ ರಸಗೊಬ್ಬರದ ತೀವ್ರ ಕೊರತೆ ಉಂಟಾಗಿ, ರೈತರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಪರದಾಡುವ ಸ್ಥಿತಿಯಲ್ಲಿದ್ದಾರೆ.
ಬಾದಾಮಿ ತಾಲೂಕಿನ ಕೆರೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ಸಹಕಾರಿ ಸಂಘಗಳ ಅಂಗಡಿಗಳ ಎದುರು ಮುಗಿ ಬೀಳುತ್ತಿದ್ದಾರೆ. ಇಲ್ಲಿನ ಸಹಕಾರಿ ಅಂಗಡಿಯಲ್ಲಿ ಗೊಬ್ಬರ 260 ರೂ.ಗೆ ಲಭ್ಯವಿರುವಾಗ, ಖಾಸಗಿ ಅಂಗಡಿಗಳು ಅದೇ ಗೊಬ್ಬರನ್ನು 410 ರೂ.ಗೆ ಮಾರಾಟ ಮಾಡುತ್ತಿವೆ. ಬಹಳಷ್ಟು ಖಾಸಗಿ ಅಂಗಡಿಗಳು ಸ್ಟಾಕ್ ಇದ್ದರೂ ಇಲ್ಲವೆಂದು ಹೇಳಿ ಹೆಚ್ಚು ಬೆಲೆಗೆ ಮಾರಾಟ ಮಾಡಲು ಸಂಚು ರೂಪಿಸುತ್ತಿರುವ ಆರೋಪ ಕೇಳಿಬಂದಿದೆ.
ರೈತರನ್ನು ಸಮಾಧಾನ ಪಡಿಸಲು ಪೊಲೀಸರು ಆಗಮಿಸಿದ್ದು, “ನಾ ಮುಂದು, ತಾ ಮುಂದು” ಎಂದು ಗೊಬ್ಬರಕ್ಕಾಗಿ ಜನ ಸಾಲಿನಲ್ಲಿ ನೂಕು ನುಗ್ಗಾಟ ನಡೆಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕೃತಕ ಅಭಾವ ಉಂಟಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಧಿಕಾರಿಗಳು, “ಸ್ಟಾಕ್ ಇದೆ” ಎಂದು ಹೇಳುತ್ತಿರುವಾಗ, ಯೂರಿಯಾ ಗೊಬ್ಬರದ ಸರಬರಾಜು ಆಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. “ಎಲ್ಲಾದರೂ ಯೂರಿಯಾ ಸಿಕ್ಕರೆ ಸಾಕು, ಬೆಲೆ ಎಷ್ಟು ಬೇಕಾದರೂ ಕೊಡುವ ಸ್ಥಿತಿಗೆ ಬಡ ರೈತರು ಬಂದು ಬಿಟ್ಟಿದ್ದಾರೆ,” ಎಂದು ಸ್ಥಳೀಯ ರೈತ ರಮೇಶ್ ಬಂಗಾರಿ ಕಿಡಿಕಾರಿದ್ದಾರೆ.
Laxmi News 24×7