ಕಾರವಾರ (ಉತ್ತರಕನ್ನಡ): ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರಿ ಗಾಳಿ ಸಹಿತ ಮಳೆಗೆ ಜನಜೀವನ ತತ್ತರಗೊಂಡಿದೆ. ಜಿಲ್ಲೆಯ ಕೆಲ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಮುಂದುವರೆದಿರುವುದು ಒಂದೆಡೆಯಾದರೆ, ಹಲವೆಡೆ ಹೆದ್ದಾರಿಗಳಲ್ಲಿ ಗುಡ್ಡ ಕುಸಿತವಾಗುತ್ತಿರುವುದು ಇನ್ನಷ್ಟು ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ 312 ಮಿ.ಮೀ ಮಳೆಯಾಗಿದೆ. ಅದರಲ್ಲಿಯೂ ಘಟ್ಟದ ಮೇಲ್ಭಾಗದ ಸಿದ್ದಾಪುರ ತಾಲೂಕು ಸೇರಿದಂತೆ ಕರಾವಳಿ ತಾಲೂಕುಗಳಲ್ಲಿ 400 ರಿಂದ 600 ಮಿ.ಮೀ.ವರೆಗೆ ಮಳೆ ಸುರಿದಿದೆ. ಶನಿವಾರ ಜಿಲ್ಲೆಯ ವಿವಿಧೆಡೆ ಮಳೆ ಬಿಡುವು ನೀಡುವ ಮುನ್ಸೂಚನೆ ಕಂಡುಬಂದರೂ ಸಂಜೆ ಬಳಿಕ ಮತ್ತೆ ವರುಣದ ಆರ್ಭಟ ಜೋರಾಗಿದೆ. ಅದರಲ್ಲಿಯೂ, ಬಿರುಗಾಳಿ ಸಹಿತ ಮಳೆಯಾಗುತ್ತಿರುವುದು ದೊಡ್ಡ ಪ್ರಮಾಣದ ಹಾನಿ ಉಂಟು ಮಾಡುತ್ತಿದೆ.![]()
ಕಾಳಜಿ ಕೇಂದ್ರಗಳಲ್ಲಿ ಆಶ್ರಯ: ಈಗಾಗಲೇ ಭಾರಿ ಮಳೆಯಿಂದಾಗಿ ಅಘನಾಶಿನಿ, ಗುಂಡಬಾಳ ನದಿಗಳು ಉಕ್ಕಿ ಹರಿಯುತ್ತಿದ್ದು, ಹೊನ್ನಾವರ ಹಾಗೂ ಕುಮಟಾದ ಕೆಲವೆಡೆ ಪ್ರವಾಹ ಸ್ಥಿತಿ ಮುಂದುವರೆದಿದೆ. ಚಿಕ್ಕನಕೋಡಿನಲ್ಲಿ 31 ಮಂದಿ, ಮುಗ್ವಾದ 41, ಹಳದಿಪುರ-1ರಲ್ಲಿ 61, ಗುಂಡಬಾಳದ 8, ಮಡಗೇರಿಯ 39, ಹಳದಿಪುರದಲ್ಲಿ 25, ಮಲ್ಲಾಪುರದ 40, ಕಡತೋಕ್ಕಾದ 107 ಹಾಗೂ ಕುಮಟಾದ ಊರಕೇರಿಯಲ್ಲಿ 36 ಮಂದಿ ಸೇರಿ ಒಟ್ಟು 395 ಜನರು 10 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ರಸ್ತೆ ಸಂಪರ್ಕ ಕಡಿತ ಸಾಧ್ಯತೆ : ಗಾಳಿ, ಮಳೆಯ ಅಬ್ಬರ ಮುಂದುವರೆದಿರುವ ಕಾರಣ ಕುಮಟಾ – ಶಿರಸಿ ಹೆದ್ದಾರಿಯ ದೇವಿಮನೆ ಘಟ್ಟದ ಕ್ಷೇತ್ರ ಪಾಲೇಶ್ವರ ದೇವಸ್ಥಾನದ ಮೆಟ್ಟಿಲು ಭಾಗದಲ್ಲಿಯೇ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದ ಶಿರಸಿ-ಕುಮಟಾ ರಸ್ತೆ ಬಂದಾಗುವ ಆತಂಕ ಎದುರಾಗಿದೆ. ಇನ್ನು ಸಿದ್ದಾಪುರ ಬಡಾಳ-ಕುಮಟಾ ರಸ್ತೆಯ ದೊಡ್ಮನೆ ಘಟ್ಟದಲ್ಲಿಯೂ ಭೂ ಕುಸಿತವಾಗಿದ್ದು, ಈ ರಾಜ್ಯ ಹೆದ್ದಾರಿಯೂ ಕೂಡ ಮುಚ್ಚುವ ಸಾಧ್ಯತೆ ಇದೆ.
ಎಲ್ಲೆಲ್ಲಿ, ಎಷ್ಟು ಮಳೆ? : ಶನಿವಾರದ ಬೆಳಗಿನ ವರದಿಯಂತೆ ಜಿಲ್ಲೆಯ ಅಂಕೋಲಾದಲ್ಲಿ 72.4 ಮಿ.ಮೀ., ಭಟ್ಕಳ 57.8, ಹಳಿಯಾಳ 33.4, ಹೊನ್ನಾವರ 143.1, ಕಾರವಾರ 56.3, ಕುಮಟಾ 114.4, ಮುಂಡಗೋಡ 24.5, ಸಿದ್ದಾಪುರ 106.3, ಶಿರಸಿ 77.8, ಜೋಯಿಡಾ 68.8, ಯಲ್ಲಾಪುರ 39.4 ಹಾಗೂ ದಾಂಡೇಲಿ 43.9 ಮಿ.ಮೀ. ಮಳೆ ವರದಿಯಾಗಿದೆ.
ವಿದ್ಯುತ್ ಸಂಪರ್ಕ ಕಡಿತ : ಬಿರುಗಾಳಿ ಸಹಿತ ಮಳೆಯಿಂದ ಅಂಕೋಲಾ ತಾಲೂಕಿನ ಹಾರವಾಡ ಪುನರ್ವಸತಿ ಕೇಂದ್ರದ ಶಾಲೆಯ ಮೇಲ್ಚಾವಣಿ ಹಾರಿಹೋಗಿದೆ. ಅದೃಷ್ಟವಶಾತ್ ಶಾಲೆಗೆ ರಜೆ ನೀಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಘಟ್ಟದ ಮೇಲ್ಭಾಗದ ಶಿರಸಿ, ಸಿದ್ದಾಪುರ ಭಾಗದಲ್ಲಿಯೂ ಬಿರುಗಾಳಿ ಬೀಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಗಾಳಿ ಸಹಿತ ಮಳೆಗೆ ಮರ, ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಕಾರಣ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
Laxmi News 24×7