ಬಾಗಲಕೋಟೆ, ಜುಲೈ 21: ಒಂದೆಡೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji), ಮತ್ತೊಂದೆಡೆ ವಿಜಯಾನಂದ ಕಾಶಪ್ಪನವರ (Vijayanand Kashappanavar) ನೇತೃತ್ವದಲ್ಲಿ ನಡೆದ ಟ್ರಸ್ಟ್ ಸಭೆ. ಇದರ ಬೆನ್ನಲ್ಲೇ ವಾಗ್ದಾಳಿ ನಡೆಸುತ್ತಿರುವ ನಾಯಕರು. ಹೀಗೆ ಕೂಡಲಸಂಗಮ ಪಂಚಮಸಾಲಿ ಪೀಠ ವಿವಾದ ತಾರಕಕ್ಕೇರುತ್ತಿದ್ದಂತೆಯೇ ಸಮಾಜದ ಮುಖಂಡರು ಸಂಧಾನದ ಸುಳಿವು ನೀಡಿದ್ದಾರೆ.
ಅತ್ತ ಹುಬ್ಬಳ್ಳಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಪಂಚಮಸಾಲಿ ಪೀಠದ ಟ್ರಸ್ಟ್ ಸಭೆ ನಡೆದಿದ್ದರೆ, ಇತ್ತ ಸ್ವಾಮೀಜಿ ಆರೋಗ್ಯ ವಿಚಾರಿಸಲು ಕೊಪ್ಪಳ, ಬೆಳಗಾವಿ, ವಿಜಯಪುರ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರ ದಂಡು ಹರಿದು ಬಂದಿತ್ತು. ಭಾನುವಾರ ಸಮಾಜದ ನಾಯಕರಾದ ಮಾಜಿ ಸಚಿವ ಸಿ.ಸಿ.ಪಾಟೀಲ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಅನೇಕರು ಆಗಮಿಸಿದ್ದರು. ಈ ವೇಳೆ ಮುಖಂಡರು ಕಾಶಪ್ಪನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಶಪ್ಪನವರ್ ವಿರುದ್ಧ ಸಿಸಿ ಪಾಟೀಲ್ ವಾಗ್ದಾಳಿ
ಕಾಶಪ್ಪನವರ ಪೀಠದಿಂದ ಸ್ವಾಮೀಜಿಯವರನ್ನು ಕೈ ಬಿಟ್ಟರೆ ಸ್ವಾಮೀಜಿಗಳೊಂದಿಗೆ ಮುನ್ನಡೆಯುತ್ತೇವೆ. ಪೀಠ ಯಾರಪ್ಪನ ಸ್ವತ್ತೂ ಅಲ್ಲ. ಹಿಟ್ಲರ್ ಧೋರಣೆ ಹುನಗುಂದ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಸಿಸಿ ಪಾಟಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರಾವಣ ಮಾಸದ ಹೊತ್ತಿಗೆ ಹಿರಿಯರ ಸಮ್ಮುಖದಲ್ಲಿ ಸಭೆ ಕರೆಯುತ್ತೇವೆ. ಇದಕ್ಕೆ ಕಾಶಪ್ಪನವರವರನ್ನೂ ಕರೆಯುತ್ತೇವೆ ಎನ್ನುವ ಮೂಲಕ ಸಂಧಾನ ಸುಳಿವು ನೀಡಿದ್ದಾರೆ.
Laxmi News 24×7