ಕಾರವಾರ(ಉತ್ತರಕನ್ನಡ): ಉತ್ತರಕನ್ನಡದ ಅಂಕೋಲಾದ ಶಿರೂರಿನಲ್ಲಿ ಸಂಭವಿಸಿದ ಮಹಾದುರಂತವೊಂದಕ್ಕೆ (ಜು.16) ಇಂದಿಗೆ ಒಂದು ವರ್ಷವಾಗಿದೆ. ಆದರೆ ದುರಂತದ ಬಳಿಕ ಸ್ವತಃ ಮುಖ್ಯಮಂತ್ರಿಯೇ ಬಂದು ಪರಿಶೀಲಿಸಿದ್ದರು. ಇಂದಿಗೂ ಗುಡ್ಡ ಕುಸಿತ ಅರೆಬರೆಯಾಗಿ ನಿರಾಶ್ರಿತರಿಗೂ ಸೂರು ದೊರೆಯದೇ ಕಣ್ಣೀರ ಗೋಳು ಮುಂದುವರಿದಿದೆ.
ಹೌದು ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಕಳೆದ ವರ್ಷ ಸಂಭವಿಸಿದ ಬೃಹತ್ ಗುಡ್ಡ ಕುಸಿತಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಈ ದುರಂತವು ಉತ್ತರಕನ್ನಡದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿ ಉಳಿದಿದೆ. ಘಟನೆ ನಡೆದು ಒಂದು ವರ್ಷ ಕಳೆದರೂ, ಮೃತದೇಹಗಳ ಹುಡುಕಾಟ ಮತ್ತು ತೆರವು ಕಾರ್ಯಾಚರಣೆ ಹೊರತುಪಡಿಸಿ, ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಮತ್ತು ಪರಿಹಾರಗಳು ಇನ್ನೂ ಮರೀಚಿಕೆಯಾಗಿವೆ ಎಂಬುದು ಅತ್ಯಂತ ನೋವಿನ ಸಂಗತಿ ಅಂತಾರೆ ಅಲ್ಲಿನ ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.
ಕರುಳು ಹಿಂಡುವ ಸತ್ಯ: ಕಾಣೆಯಾದ ಎರಡು ದೇಹಗಳು, ನಿರಾಶ್ರಿತರಿಗೆ ಇಲ್ಲದ ನೆಲೆ: ಶಿರೂರು ಗುಡ್ಡ ಕುಸಿತದಲ್ಲಿ 11 ಜೀವಗಳು ಬಲಿಯಾಗಿದ್ದವು. ದುರಂತ ಸಂಭವಿಸಿದ ನಂತರ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಭೀಕರ ತೆರವು ಕಾರ್ಯಾಚರಣೆಯಲ್ಲಿ, ಸಿಕ್ಕಷ್ಟೂ ಮೃತದೇಹಗಳನ್ನು ಹೊರತೆಗೆಯಲಾಯಿತು. ಆದರೆ, ದುರದೃಷ್ಟವಶಾತ್, ಎರಡು ಮೃತದೇಹಗಳು ಈವರೆಗೂ ಪತ್ತೆಯಾಗಿಲ್ಲ. ಅವರ ಕುಟುಂಬಗಳ ಕಣ್ಣೀರು ಮತ್ತು ಆತಂಕ ಇಂದಿಗೂ ಮುಂದುವರೆದಿದೆ. ತಮ್ಮವರ ಅಂತಿಮ ದರ್ಶನವೂ ಸಿಗದ ನೋವು ಆ ಕುಟುಂಬಗಳನ್ನು ನಿರಂತರವಾಗಿ ಕಾಡುತ್ತಿದೆ. ಅಲ್ಲದೇ ಹೆದ್ದಾರಿ ಬದಿ ಹೊಟೇಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಹಾಗೂ ಪತ್ನಿ ಮತ್ತು ಮಕ್ಕಳು ಸೇರಿ ಕುಟುಂಬವೇ ಸಾವನ್ನಪ್ಪಿದ್ದರು. ಪರಿಹಾರ ಪಡೆಯುವುದಕ್ಕೂ ಕುಟುಂಬದಲ್ಲಿ ಯಾರು ಇಲ್ಲದಂತಾಗಿತ್ತು.

ಶಿರೂರು ಗುಡ್ಡ ಕುಸಿತಕ್ಕೆ ಒಂದು ವರ್ಷ; ಮುಗಿಯದ ಸಂತ್ರಸ್ತರ ಕಣ್ಣೀರ ಗೋಳು! (ETV Bharat)
ಇದಲ್ಲದೇ, ಪಕ್ಕದ ಉಳುವರೆ ಗ್ರಾಮದ ಏಂಟು ಕುಟುಂಬದ ಸಂತ್ರಸ್ತರಿಗೆ ಮನೆ ನಿವೇಶನ ನೀಡುವ ಭರವಸೆ ಇನ್ನೂ ಈಡೇರಿಲ್ಲ. ತಮ್ಮ ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾದ ಈ ಜನರು ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರ್ಕಾರದಿಂದ ಸಿಗಬೇಕಾದ ಸೂರು ಕನಸಾಗಿಯೇ ಉಳಿದಿದೆ. ಊರ ಪಕ್ಕದಲ್ಲಿ ಒಂದುಕಾಲು ಗುಂಟೆ ಜಾಗ ಗುರುತಿಸಿದ್ದು ಈವರೆಗೂ ಪರಿಹಾರವೂ ಕೈ ಸೇರಿಲ್ಲ ಎನ್ನುತ್ತಾರೆ ಸಂತ್ರಸ್ತರಾದ ವಿನಾಯಕ ಗೌಡ.
Laxmi News 24×7