ಬೆಂಗಳೂರು: ನಗದು ಹಣವನ್ನು ಯುಎಸ್ಡಿಟಿ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರನ್ನು ಕರೆಸಿಕೊಂಡು, ಮಾರಕಾಸ್ತ್ರ ತೋರಿಸಿ 2 ಕೋಟಿ ರೂ. ನಗದು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಂಜಮಿನ್ ಹರ್ಷ, ರಕ್ಷಿತ್, ಪ್ರಕಾಶ್ ಹಾಗೂ ಭರತ್ ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಲಿಗೆ ಸಂಬಂಧ ಉದ್ಯಮಿ ವಿ. ಶ್ರೀಹರ್ಷ ಪೊಲೀಸರಿಗೆ ದೂರು ನೀಡಿದ್ದರು. ಕೆಂಗೇರಿ ನಿವಾಸಿ ಶ್ರೀಹರ್ಷ ಕೋಲ್ಡ್ ಪ್ರೆಸ್ಡ್ ಆಯಿಲ್ ಉದ್ಯಮ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ 2 ಕೋಟಿ ರೂ. ಸಂಗ್ರಹಿಸಿಟ್ಟುಕೊಂಡಿದ್ದರು. ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಜರ್ಮನಿಯಿಂದ ಖರೀದಿಸಬೇಕಿತ್ತು. ವಿದೇಶಿ ಕಂಪನಿಗೆ ಯು.ಎಸ್. ಡಾಲರ್ನಲ್ಲಿ ಹಣ ಪಾವತಿಸಬೇಕಾಗಿದ್ದರಿಂದ 2 ಕೋಟಿ ರೂ. ನಗದನ್ನು ಪರಿವರ್ತಿಸಿಕೊಳ್ಳಲು ನಿರ್ಧರಿಸಿದ್ದರು.
ಸ್ನೇಹಿತ ರಕ್ಷಿತ್ ಮೂಲಕ ಬೆಂಜಮಿನ್ ಹರ್ಷ, ತಾನು 2 ಕೋಟಿ ರೂ.ನಗದನ್ನು ಅಮೆರಿಕನ್ ಡಾಲರ್ ಆಗಿ ಬದಲಾಯಿಸಿ ಕೊಡುವುದಾಗಿ ಭರವಸೆ ನೀಡಿದ್ದ. ಜತೆಗೆ, ಹಣದ ಸಮೇತ ಎಂ.ಎಸ್.ಪಾಳ್ಯ ಸರ್ಕಲ್ಗೆ ಜೂ. 25ರಂದು ಬರುವಂತೆ ಹರ್ಷಾನನ್ನು ಕರೆಸಿಕೊಂಡಿದ್ದ. ಬಳಿಕ ಬೆಂಜಮಿನ್ ಹರ್ಷ ಮಳಿಗೆಯೊಂದಕ್ಕೆ ಕರೆದೊಯ್ದಿದ್ದ.
ಮತ್ತೊಂದೆಡೆ ಅದೇ ದಿನ ಸಂಜೆ 4.30ರ ವೇಳೆ ಹಣ ಎಣಿಸುತ್ತಿರುವಾಗಲೇ ಸುಮಾರು ಐದಾರು ಮಂದಿ ಅಪರಿಚಿತರು ಏಕಾಏಕಿ ಮಳಿಗೆ ಒಳಗೆ ನುಗ್ಗಿದ್ದರು. ಆಗ ಅಪರಿಚಿತರು ಮಾರಕಾಸ್ತ್ರ ತೋರಿಸಿ 2 ಕೋಟಿ ರೂ.ನಗದು ಚೀಲಕ್ಕೆ ತುಂಬಿಕೊಂಡು ಮಳಿಗೆಯ ರೋಲಿಂಗ್ ಶೆಟರ್ ಹಾಕಿ ಪರಾರಿಯಾದರು ಎಂದು ಶ್ರೀಹರ್ಷ ದೂರಿನಲ್ಲಿ ಉಲ್ಲೇಖಿಸಿದ್ದರು.
Laxmi News 24×7