ಹಾರ್ಟ್ ಅಟ್ಯಾಕ್ ಭಯ : ತಪಾಸಣೆಗಾಗಿ ಮೈಸೂರಿನ ಜಯದೇವ ಆಸ್ಪತ್ರೆಗೆ ಯುವಕರ ಲಗ್ಗೆ
ಮೈಸೂರು : ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಯುವಜನರೇ ಸಾಯುತ್ತಿರುವ ಘಟನೆಗಳಿಂದ ಭಯಭೀತರಾದ ಹಾಸನ, ಮಂಡ್ಯ ಹಾಗೂ ಮೈಸೂರಿನ ಜನರು ತಪಾಸಣೆಗಾಗಿ ಜಿಲ್ಲೆಯ ಸರ್ಕಾರಿ ಜಯದೇವ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಅದರಲ್ಲಿಯೂ ಈ ಮಧ್ಯೆ ತಪಾಸಣೆಗೆ ಹೆಚ್ಚಾಗಿ ಯುವಕರೇ ಬರುತ್ತಿರುವುದು ಹೃದಯಾಘಾತದ ಭಯ ಹೆಚ್ಚಿದಂತೆ ಕಂಡು ಬರುತ್ತಿದೆ.
ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಹಳೆ ಮೈಸೂರು ಭಾಗದ ಹೃದ್ರೋಗಿಗಳಿಗೆ ಪರಿಚಿತವಾದ ಹಾಗೂ ಸರ್ಕಾರಿ ಆಸ್ಪತ್ರೆ ಆಗಿದೆ. ಹಾಸನ ಜಿಲ್ಲೆಯಲ್ಲಿ ಕಳೆದ 40 ದಿನಗಳಲ್ಲಿ 20ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅದರಲ್ಲಿ ಹೆಚ್ಚಾಗಿ ಯುವಕರೇ ಸಾವನ್ನಪ್ಪಿರುವುದು ಈ ಭಾಗದ ಯುವಜನರಲ್ಲಿ ಹೃದಯಾಘಾತದ ಭೀತಿಯನ್ನು ಹೆಚ್ಚಿಸಿದೆ.
ಈ ಆಸ್ಪತ್ರೆಗೆ ಪ್ರತಿನಿತ್ಯ 250 ರಿಂದ 300 ಮಂದಿ ತಪಾಸಣೆಗೆ ಬರುತ್ತಿದ್ದರು. ಆದರೀಗ ಹಾಸನದಲ್ಲಿ ಹೃದಯಾಘಾತದಿಂದ ಯುವಕರೇ ಉಸಿರು ಚೆಲ್ಲುತ್ತಿರುವ ಹಿನ್ನೆಲೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ತಪಾಸಣೆಗೆ ಬರುತ್ತಿದ್ದಾರೆ.
ಸೋಮವಾರ ಹಾಗೂ ಮಂಗಳವಾರ ಸಹ ಹಾಸನ ಸೇರಿದಂತೆ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಂದ ಅತಿ ಹೆಚ್ಚು ಯುವಕರು ತಪಾಸಣೆಗಾಗಿ ಆಗಮಿಸಿದ್ದಾರೆ. ಹೀಗಾಗಿ, ಆಸ್ಪತ್ರೆಯ ಒ.ಪಿ.ಡಿ ನಿರ್ವಹಣೆ ಮಾಡಲು ಸಿಬ್ಬಂದಿ ಕಷ್ಟಪಡುತ್ತಿದ್ದಾರೆ.
Laxmi News 24×7